
ಬೆಂಗಳೂರು: ‘ರಾಜ್ಯದಲ್ಲಿ ಕನ್ನಡ ಭಾಷಾ ವಸ್ತುಸಂಗ್ರಹಾಲಯ ಸ್ಥಾಪಿಸಬೇಕು. ಮುಂಬರುವ ಬಜೆಟ್ನಲ್ಲಿ ಈ ಬಗ್ಗೆ ಘೋಷಿಸಬೇಕು’ ಎಂದು ಕನ್ನಡ ಗೆಳೆಯರ ಬಳಗ ಹಾಗೂ ಕರ್ನಾಟಕ ವಿಕಾಸ ರಂಗ ಆಗ್ರಹಿಸಿದೆ.
ಈ ಬಗ್ಗೆ ಜಂಟಿ ಪ್ರಕಟಣೆ ನೀಡಿದ್ದು, ‘ವಿಜ್ಞಾನ-ತಂತ್ರಜ್ಞಾನಗಳು ಮೇಲುಗೈ ಸಾಧಿಸಿದ ಪರಿಣಾಮ ಇಡೀ ಸಮಾಜ ಅದರ ಆಕರ್ಷಣೆಯಲ್ಲಿ ಸಿಲುಕಿದೆ. ಇದರಿಂದಾಗಿ ಭಾಷಾ ಅಧ್ಯಯನ ಯಾರಿಗೂ ಬೇಡವಾಗಿದೆ. ಮನುಷ್ಯನ ಅಸ್ಮಿತೆಯಾದ ಭಾಷೆಯ ಮಹತ್ವವನ್ನು ಯುವಜನರು ಅರಿತಿಲ್ಲ. ಈ ಸನ್ನಿವೇಶದಲ್ಲಿ ಭಾಷಾ ವಸ್ತುಸಂಗ್ರಹಾಲಯಗಳ ಅಗತ್ಯವಿದೆ. ಭಾಷೆಯ ಮಹತ್ವವನ್ನು ಜನರಿಗೆ ತಿಳಿಸುವ ಪ್ರಯತ್ನವಾಗಿ ಭಾಷಾ ವಸ್ತುಸಂಗ್ರಹಾಲಯಗಳು ಹಲವು ದೇಶಗಳಲ್ಲಿ ಸ್ಥಾಪನೆಯಾಗುತ್ತಿವೆ’ ಎಂದು ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ ಹಾಗೂ ವಿಕಾಸ ರಂಗದ ಅಧ್ಯಕ್ಷ ವ.ಚ. ಚನ್ನೇಗೌಡ ಹೇಳಿದ್ದಾರೆ.
‘ಭಾಷೆಯ ಅವನತಿ ತಡೆಯಲು ಗುಜರಾತ್, ಉತ್ತರ ಪ್ರದೇಶ, ತಮಿಳುನಾಡು ಮತ್ತು ಒಡಿಶಾ ರಾಜ್ಯಗಳು ಭಾಷಾ ವಸ್ತುಸಂಗ್ರಹಾಲಯ ಸ್ಥಾಪಿಸಲು ಕ್ರಿಯಾಶೀಲವಾಗಿವೆ. ಕೇರಳ ಸರ್ಕಾರ ಕೊಟ್ಟಾಯಂನಲ್ಲಿ ಸ್ಥಾಪಿಸಿರುವ ‘ಅಕ್ಷರಂ’ ದೇಶದ ಮೊದಲ ಭಾಷಾ ವಸ್ತುಸಂಗ್ರಹಾಲಯವಾಗಿ ಗಮನ ಸೆಳೆದಿದೆ. ಕರ್ನಾಟಕದಲ್ಲಿಯೂ ಕನ್ನಡ ವಸ್ತು ಸಂಗ್ರಹಾಲಯ ಸ್ಥಾಪನೆಯಾಗುವ ಅಗತ್ಯವಿದ್ದು, ಬಜೆಟ್ನಲ್ಲಿ ಘೋಷಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.