ಸಮೀರ್ ಎಂ.ಡಿ
ಬೆಂಗಳೂರು: ಅನೇಕಲ್ ತಾಲ್ಲೂಕಿನ ಜಿಗಣಿ ಸಮೀಪದ ಹುಲ್ಲಹಳ್ಳಿಯ ಬಾಡಿಗೆ ಮನೆಯೊಂದರಲ್ಲಿ ಯುಟ್ಯೂಬರ್ ಎಂ.ಡಿ.ಸಮೀರ್ ಅವರು ನೆಲಸಿದ್ದಾರೆ ಎಂಬ ಮಾಹಿತಿ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಗುರುವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲಿಸಿದರು.
ಆರು ಮಂದಿ ಒಳಗೊಂಡ ಪೊಲೀಸ್ ತಂಡವು ಬೆಳಿಗ್ಗೆ 8.30ರ ಸುಮಾರಿಗೆ ಜಿಗಣಿಗೆ ಭೇಟಿ ನೀಡಿತ್ತು. ಸಮೀರ್ ಅವರು ವಾಸ ಮಾಡುತ್ತಿದ್ದರು ಎನ್ನಲಾದ ಬಾಡಿಗೆ ಮನೆಗೆ ಬೀಗ ಹಾಕಲಾಗಿತ್ತು. ಮಧ್ಯಾಹ್ನದವರೆಗೂ ಅದೇ ಗ್ರಾಮದ ನಿವಾಸಿಗಳಿಂದ ಪೊಲೀಸರು ಮಾಹಿತಿ ಕಲೆ ಹಾಕಿ ತೆರಳಿದರು ಎಂದು ಗೊತ್ತಾಗಿದೆ.
ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀರ್ ಅವರು ವಿಡಿಯೊವೊಂದನ್ನು ಮಾಡಿ, ಯುಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ್ದರು. ಆ ವಿಡಿಯೊಗೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಲು, ದಾಖಲೆ ಸಂಗ್ರಹಿಸಲು ವಿಶೇಷ ತನಿಖಾ ದಳದ (ಎಸ್ಐಟಿ) ಸೂಚನೆ ಮೇರೆಗೆ ಪೊಲೀಸ್ ತಂಡವು ಜಿಗಣಿಗೆ ಭೇಟಿ ನೀಡಿತ್ತು ಎಂದು ಗೊತ್ತಾಗಿದೆ.
‘ಸಮೀರ್ ಅವರ ಪರಿಚಯ ಇಲ್ಲ. ಅವರು ಹೊರಗೆ ಕಾಣಿಸಿಕೊಳ್ಳುತ್ತಿರಲಿಲ್ಲ. ಯುಟ್ಯೂಬ್ನಲ್ಲಿ ಅಪ್ಲೋಡ್ ಆಗಿದ್ದ ವಿಡಿಯೊವೊಂದರಲ್ಲಿ ಅವರನ್ನು ನೋಡಿದ್ದೇವೆ ಎಂಬುದಾಗಿ ಅಕ್ಕಪಕ್ಕದ ನಿವಾಸಿಗಳು ಪೊಲೀಸ್ ತಂಡಕ್ಕೆ ಮಾಹಿತಿ ನೀಡಿದ್ದಾರೆ’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.