
ಬೆಂಗಳೂರು: ‘ನಿಯಮಿತ ಆಹಾರ ಹಾಗೂ ವ್ಯಾಯಾಮ, ಉತ್ತಮ ಜೀವನಶೈಲಿ ಹಾಗೂ ಆರೋಗ್ಯ ತಪಾಸಣೆಗೆ ಒತ್ತು ನೀಡುವುದರಿಂದ ಮಧುಮೇಹದ ಅಪಾಯದಿಂದ ಪಾರಾಗಬಹುದು’ ಎಂದು ನಟ ದತ್ತಣ್ಣ ಸಲಹೆ ನೀಡಿದರು.
ಮಧುಮೇಹ ಜಾಗೃತಿಗಾಗಿ ರೋಟರಿ ಬೆಂಗಳೂರು ಶಂಕರ ಪಾರ್ಕ್ ಮತ್ತು ರೋಟರಿ ಸ್ಪಂದನ ಸಂಯುಕ್ತವಾಗಿ ಆಯೋಜಿಸಿದ್ದ ವಾಕಥಾನ್ನಲ್ಲಿ ಅವರು ಮಾತನಾಡಿದರು.
ರೋಟರಿ ಜಿಲ್ಲಾ ಗವರ್ನರ್ ಶ್ರೀಧರ್ ಮಾತನಾಡಿ, ‘ಮಧುಮೇಹದ ಕುರಿತು ಜಾಗೃತಿ ಮೂಡಿಸುವ ಪ್ರಯತ್ನಗಳು ಹೆಚ್ಚುತ್ತಿರುವುದು ಶ್ಲಾಘನೀಯ. ರೋಟರಿ ಸಂಸ್ಥೆಯೂ ಕೈ ಜೋಡಿಸಿರುವುದರಿಂದ ಹೆಚ್ಚಿನ ಜನರಿಗೆ ಇದರ ಉಪಯೋಗ ಸಿಗಲಿದೆ’ ಎಂದು ಹೇಳಿದರು.
ಎನ್ಸ್ಟ್ರೈಡ್, ಐಎಂಎ ಹಾಗೂ ರಂಗಾದೊರೆ ಮೆಮೋರಿಯಲ್ ಆಸ್ಪತ್ರೆ ಸಹಕಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಮಧುಮೇಹ ತಪಾಸಣೆ, ಸಲಹೆ ಹಾಗೂ ಆರೋಗ್ಯ ಮಾರ್ಗದರ್ಶನವನ್ನು ತಜ್ಞರು ನೀಡಿದರು.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸೃಜನ ಸಾಂಸ್ಕೃತಿಕ ಸಮೂಹ, ನ್ಯಾಷನಲ್ ಇಂಗ್ಲಿಷ್ ಸ್ಕೂಲ್, ಬಸವನಗುಡಿ ನ್ಯಾಷನಲ್ ಕಾಲೇಜು, ವಿಶ್ವ ಸಾಯಿ ನರ್ಸಿಂಗ್ ಕಾಲೇಜು ಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.