ಬೆಂಗಳೂರು: ಐಡಿಬಿಐ ಬ್ಯಾಂಕ್ನಿಂದ ಪಡೆದಿದ್ದ ಸಾಲ ಮರು ಪಾವತಿ ಮಾಡದಿದ್ದಕ್ಕಾಗಿ ನಿರ್ದೇಶಕ ಎಸ್. ನಾರಾಯಣ ಅವರನ್ನು ಶುಕ್ರವಾರ ಮಧ್ಯಾಹ್ನ ಬಂಧಿಸಿದ್ದ ಬಸವೇಶ್ವರ ನಗರ ಪೊಲೀಸರು, ನ್ಯಾಯಾಲಯದ ಜಾಮೀನು ಮೇರೆಗೆ ಸಂಜೆ ಬಿಡುಗಡೆ ಮಾಡಿದ್ದಾರೆ.
‘ನಾರಾಯಣ್ ಅವರು ಬ್ಯಾಂಕ್ನಿಂದ ₹ 3 ಕೋಟಿ ಸಾಲ ಪಡೆದಿದ್ದರು. ನಿಗದಿತ ಸಮಯಕ್ಕೆ ಮರು ಪಾವತಿ ಮಾಡಿರಲಿಲ್ಲ. ಅಸಲು ಹಾಗೂ ಬಡ್ಡಿ ಸೇರಿ ಸಾಲದ ಮೊತ್ತ ₹ 10 ಕೋಟಿ ಆಗಿತ್ತು. ಬ್ಯಾಂಕ್ನವರು ನೋಟಿಸ್ ನೀಡಿದರೂ ಸಾಲ ಕಟ್ಟಿರಲಿಲ್ಲ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಬ್ಯಾಂಕ್ ಅಧಿಕಾರಿಗಳು, ಸಾಲ ವಸೂಲಾತಿ ನ್ಯಾಯಾಧೀಕರಣದಲ್ಲಿ ಮೊಕದ್ದಮೆ ಹೂಡಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಧೀಕರಣ, ನಾರಾಯಣ ಅವರ ಬಂಧನಕ್ಕೆ ವಾರಂಟ್ ಜಾರಿ ಮಾಡಿತ್ತು. ಶುಕ್ರವಾರ ಅವರನ್ನು ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸಲಾಯಿತು. ಅಲ್ಲಿಯೇ ಅವರಿಗೆ ಜಾಮೀನು ಸಿಕ್ಕಿತು’ ಎಂದು ಪೊಲೀಸ್ ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.