ಬೆಂಗಳೂರು: ಕೊರೊನಾ ಲಾಕ್ಡೌನ್ನಿಂದ ಆಹಾರ ಸಮಸ್ಯೆ ಎದುರಾಗಿರುವ ಗೋವಿಂದರಾಜ ನಗರ ಹಾಗೂ ವಿಜಯನಗರ ವಾರ್ಡ್ನ ಹತ್ತು ಸಾವಿರ ಬಡ ಕುಟುಂಬಗಳಿಗೆ ವಸತಿ ಸಚಿವ ವಿ.ಸೋಮಣ್ಣ ಅವರ ನೇತೃತ್ವದಲ್ಲಿ ಸೋಮವಾರ ಆಹಾರ ಕಿಟ್ ವಿತರಿಸಲಾಯಿತು.
ಬಾಲಗಂಗಾಧರನಾಥ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ "ಜನ ಸಾಮಾನ್ಯರ ಸ್ಪಂದನೆ' ಹೆಸರಿನಲ್ಲಿ ಮಹಿಳೆಯರು ಹಾಗೂ ಕೂಲಿ ಕಾರ್ಮಿಕರಿಗೆ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಉಪ್ಪು, ಸಕ್ಕರೆ, ಮೈದಾ ಇನ್ನಿತರ ದಿನಸಿ ಪದಾರ್ಥಗಳನ್ನೊಳಗೊಂಡ ಆಹಾರ ಕಿಟ್ ವಿತರಣೆ, ಆರೋಗ್ಯ ತಪಾಸಣೆ ಕಿಟ್, ಸೋಂಕು ನಿವಾರಕ ಔಷಧಿ ಸಿಂಪಡನೆ ಯಂತ್ರಗಳು ಹಾಗೂ ಅಗ್ನಿಶಾಮಕ ವಾಹನ ಮೂಲಕ ರಾಸಯನಿಕ ಸಿಂಪಡನೆ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿ," ಗೋವಿಂದರಾಜನಗರ, ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಪಿ.ಎಲ್.ಕಾರ್ಡ್ ಇಲ್ಲದ ಬಡವರು ,ಕೂಲಿ ಕಾರ್ಮಿಕರು ,ಆಟೊ ಚಾಲಕರಿಗೆ ಆಹಾರ ಕಿಟ್ ವಿತರಿಸಲಾಗುತ್ತಿದೆ. ಹಸಿವನಿಂದ ಯಾರೂ ಬಳಲಬಾರದು. ಬಡವರ ಅನುಕೂಲಕ್ಕಾಗಿ ಸಹಾಯವಾಣಿ ಸೇವೆ ಒದಗಿಸಲಾಗಿದೆ. ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧ ಶೀಘ್ರದಲ್ಲೇ ನಮಗೆ ಜಯ ಸಿಗಲಿದೆ' ಎಂದರು.
ಪಾಲಿಕೆ ಸದಸ್ಯ ಕೆ.ಉಮೇಶ್ ಶೆಟ್ಟಿ," ಬಡವರು ಸುಲಭವಾಗಿ ಆಹಾರ ತಯಾರಿಸಿಕೊಳ್ಳಲು ಅನುಕೂಲವಾಗುವಂತೆ ಆಹಾರ ಕಿಟ್ಗಳನ್ನು ವಿತರಿಸಿದ್ದೇವೆ. ಕೊರೊನಾದಂತಹ ಅಪಾಯದಿಂದ ಜನರನ್ನು ಕಾಪಾಡುವುದು ನಮ್ಮ ಕರ್ತವ್ಯ. ಲಾಕ್ಡೌನ್ ಮುಗಿಯುವವರೆಗೂ ಆಹಾರ ವಿತರಣೆ ಮಾಡಲಿದ್ದೇವೆ' ಎಂದರು.
ಸೋಂಕು ಹರಡದಂತೆ ಮೈದಾನದಲ್ಲಿ ಸಾಮಾಜಿಕ ಅಂತರ ಪಾಲಿಸುವ ಚೌಕಟ್ಟುಗಳನ್ನು ನಿರ್ಮಿಸಿ, ಆಹಾರದ ಕಿಟ್ ವಿತರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.