ADVERTISEMENT

ಡಿ.ಜೆ.ಹಳ್ಳಿ ಗಲಭೆ: ನವೀನ್‌ಗೆ ಷರತ್ತು ಬದ್ಧ ಜಾಮೀನು

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2020, 2:01 IST
Last Updated 23 ಅಕ್ಟೋಬರ್ 2020, 2:01 IST
ಪಿ ನವೀನ್‌
ಪಿ ನವೀನ್‌   

ಬೆಂಗಳೂರು: ಆಗಸ್ಟ್ 11ರಂದು ನಡೆದ ಡಿ.ಜೆ.ಹಳ್ಳಿ ಗಲಭೆಗೆ ಕಾರಣವಾದ ಫೇಸ್‌ಬುಕ್ ಪೋಸ್ಟ್ ಪ್ರಕಟಿಸಿದ ಆರೋಪಿ ಪಿ. ನವೀನ್‌ಗೆ ಹೈಕೋರ್ಟ್‌ ಷರತ್ತು ಬದ್ಧ ಜಾಮೀನು ನೀಡಿದೆ.

‘ಯಾವುದೇ ದುರುದ್ದೇಶದಿಂದ ನವೀನ್ ತನ್ನ ಫೇಸ್‌ಬುಕ್‌ನಲ್ಲಿ ಗಲಭೆಗೆ ಕಾರಣವಾದ ಪೋಸ್ಟ್ ಅಪ್‌ಲೋಡ್ ಮಾಡಿರಲಿಲ್ಲ. ಆನ್‌ಲೈನ್‌ನಲ್ಲಿ ಬಂದಿದ್ದನ್ನು ಫಾರ್‌ವರ್ಡ್‌ ಮಾಡಿದ್ದ. ವಿಷಯದ ಗಂಭೀರತೆ ಅರ್ಥವಾದ ಕೂಡಲೇ ಅದೇ ದಿನ ಸಂಜೆ ಅದನ್ನು ತನ್ನ ಖಾತೆಯಿಂದ ತೆಗೆದಿದ್ದಾನೆ’ ಎಂದು ನವೀನ್ ಪರ ವಕೀಲರು ತಿಳಿಸಿದರು.

‘ಈ ರೀತಿ ಪೋಸ್ಟ್ ಹಾಕುವುದನ್ನು ನವೀನ್ ಅಭ್ಯಾಸ ಮಾಡಿಕೊಂಡಿದ್ದಾನೆ. ಆತನ ವಿರುದ್ಧ ವಿವಿಧ ಠಾಣೆಗಳಲ್ಲಿ ಇದೇ ರೀತಿಯ ಏಳು ಪ್ರಕರಣಗಳು ದಾಖಲಾಗಿವೆ. ಅಲ್ಲದೇ ವ್ಯಕ್ತಿಯೊಬ್ಬ ನವೀನ್‌ ತಲೆಗೆ ಬಹುಮಾನ ಘೋಷಣೆ ಮಾಡಿರುವ ಕಾರಣ ಜಾಮೀನು ನೀಡಿದರೆ ಆತನ ಜೀವಕ್ಕೆ ಅಪಾಯ ಇದೆ’ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪಿ. ಪ್ರಸನ್ನಕುಮಾರ್ ವಾದಿಸಿದರು.

ADVERTISEMENT

‘ಜೀವಕ್ಕೆ ಅಪಾಯವಿದೆ ಎಂಬ ಕಾರಣಕ್ಕೆ ಜಾಮೀನು ನಿರಾಕರಿಸುವುದು ಮೂಲಭೂತ ಹಕ್ಕಿಗೆ ವಿರುದ್ಧವಾದ ನಡೆ’ ಎಂದು ನ್ಯಾಯಮೂರ್ತಿ ಬಿ.ಎ. ಪಾಟೀಲ ಅಭಿಪ್ರಾಯಪಟ್ಟರು.

‘₹2 ಲಕ್ಷ ಮೊತ್ತಕ್ಕೆ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಮತ್ತೊಬ್ಬರ ಶ್ಯೂರಿಟಿ ನೀಡಬೇಕು. ಪ್ರತಿ ತಿಂಗಳ 1ರಂದು ಠ್ಯಾಣೆಗೆ ಹಾಜರಾಗಬೇಕು. ಪೂರ್ವಾನುಮತಿ ಇಲ್ಲದೆ ವಿಚಾರಣಾ ನ್ಯಾಯಾಲಯದ ವ್ಯಾಪ್ತಿಯಿಂದ ಹೊರ ಹೋಗಬಾರದು’ ಎಂದು ತಿಳಿಸಿದ್ದಾರೆ.

ಜಾಮೀನು ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿದ್ದರಿಂದ ನವೀನ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.