
ಡಿ.ಕೆ. ಶಿವಕುಮಾರ್
ಬೆಂಗಳೂರು: ‘ಇಕ್ಬಾಲ್ ಹುಸೇನ್ ಮಾತನ್ನು ಯಾರೂ ಗಣನೆಗೆ ತೆಗೆದುಕೊಳ್ಳಬೇಡಿ. ಅವನಿಗೆ ಮಾತಿನ ಚಟ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ರಾಮನಗರದಲ್ಲಿ ಶನಿವಾರ ಮಾತನಾಡಿದ ಕಾಂಗ್ರೆಸ್ ಶಾಸಕ ಇಕ್ಬಾಲ್, ‘ಶಿವಕುಮಾರ್ ಅವರಿಗೆ 6 ಮತ್ತು 9 ಅವರ ಅದೃಷ್ಟ ಸಂಖ್ಯೆ. ಹಾಗಾಗಿ ಬಹುತೇಕ ಜ.6ರಂದೇ ಅವರಿಗೆ ಹುದ್ದೆ ಸಿಗಲಿದೆ’ ಎಂದು ಹೇಳಿದ್ದರು.
ಈ ಬಗ್ಗೆ ದೇವನಹಳ್ಳಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ಅವನ ತಲೆ ಕೆಟ್ಟಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸುದ್ದಿಗಾರರು ಕೇಳಿದಾಗ, ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
‘ಮುಖ್ಯಮಂತ್ರಿಯಾಗಬೇಕೆಂಬ ಶಿವಕುಮಾರ್ ಬೇಡಿಕೆಗೆ ಹೈಕಮಾಂಡ್ ಒಪ್ಪಿಲ್ಲ. ಹೀಗಾಗಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ’ ಎಂದು ಸಿದ್ದರಾಮಯ್ಯ ಮಗ ಯತೀಂದ್ರ ಅವರ ಹೇಳಿಕೆ ನೀಡಿದ ಬಳಿಕ ರಾಜ್ಯ ರಾಜಕಾರಣದಲ್ಲಿ ಮತ್ತೆ ಅಧಿಕಾರ ಹಂಚಿಕೆ ವಿಷಯ ಮುನ್ನೆಲೆಗೆ ಬಂದಿತ್ತು.
ಬೆಳಗಾವಿ ಅಧಿವೇಶನದ ವೇಳೆ, ಅಲ್ಲಿ ನಡೆಯುತ್ತಿರುವ ಔತಣಕೂಟವು ನಾಯಕತ್ವ ಬದಲಾವಣೆಯ ವಿಷಯವನ್ನು ಮತ್ತಷ್ಟು ರಂಗೇರಿಸಿತ್ತು. ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಆಪ್ತ ಶಾಸಕರು, ತಮ್ಮ ನಾಯಕರ ಪ್ರತಿನಿತ್ಯ ಹೇಳಿಕೆ ನೀಡುತ್ತಿದ್ದು, ದೊಡ್ಡ ಮಟ್ಟದ ಚರ್ಚೆಗೂ ಕಾರಣವಾಗಿದೆ.
7 ಅಥವಾ 8ರಂದು ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂದು ಈಚೆಗೆ ಹೇಳಿದ್ದ ಅವರ ಅತ್ಯಾಪ್ತ ಶಾಸಕ ಇಕ್ಬಾಲ್, ಶನಿವಾರ ಮತ್ತೊಂದು ದಿನಾಂಕವನ್ನು ಹೇಳಿದ್ದಾರೆ.
ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎನ್ನುವುದೆಲ್ಲ ಸೆಕೆಂಡರಿ. ಅವರ ನಡವಳಿಕೆಯೂ ಮುಖ್ಯವಾಗುತ್ತದೆ. ಸಚಿವ ಪರಮೇಶ್ವರ ಮುಂದಿನ ಮುಖ್ಯಮಂತ್ರಿಯಾಗಲಿ ಎಂದು ಹಾರೈಸುವೆವಿ.ಸೋಮಣ್ಣ, ರೈಲ್ವೆ ಖಾತೆ ರಾಜ್ಯ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.