ADVERTISEMENT

ಸಿಎಂ, ಡಿಸಿಎಂ ಭೇಟಿಯಾದ ಕಿರಣ್‌ ಮಜುಂದಾರ್‌ ಷಾ: ಅಭಿವೃದ್ಧಿ ಬಗ್ಗೆ ಚರ್ಚೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಅಕ್ಟೋಬರ್ 2025, 7:08 IST
Last Updated 21 ಅಕ್ಟೋಬರ್ 2025, 7:08 IST
<div class="paragraphs"><p>ಡಿಸಿಎಂ ಡಿ.ಕೆ. ಶಿವಕುಮಾರ್‌&nbsp; ಉದ್ಯಮಿ ಕಿರಣ್‌ ಮಜುಂದಾರ್‌ ಷಾ&nbsp;ಭೇಟಿ</p></div>

ಡಿಸಿಎಂ ಡಿ.ಕೆ. ಶಿವಕುಮಾರ್‌  ಉದ್ಯಮಿ ಕಿರಣ್‌ ಮಜುಂದಾರ್‌ ಷಾ ಭೇಟಿ

   

ಚಿತ್ರ ಕೃಪೆ: DKShivakumar

ಬೆಂಗಳೂರು: ನಗರದಲ್ಲಿನ ರಸ್ತೆಗುಂಡಿ ಮತ್ತು ಕಸದ ಸಮಸ್ಯೆಯ ಕುರಿತು ರಾಜ್ಯ ಸರ್ಕಾರವನ್ನು ಇತ್ತೀಚೆಗೆ ಕಟುವಾಗಿ ಟೀಕಿಸಿದ್ದ ಬಯೋಕಾನ್ ಕಂಪನಿ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಅವರು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಮಂಗಳವಾರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ADVERTISEMENT

ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವರ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಷಾ ಭೇಟಿ ಮಾಡಿದರು. ಈ ವೇಳೆ ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಇದ್ದರು. 

ಷಾ ಅವರ ಭೇಟಿ ಕುರಿತು ಸಂತಸ ವ್ಯಕ್ತಪಡಿಸಿ ತಮ್ಮ ‘ಎಕ್ಸ್‌’ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್, ‘ಬೆಂಗಳೂರಿನ ಬೆಳವಣಿಗೆ, ನಾವೀನ್ಯತೆ ಮತ್ತು ಕರ್ನಾಟಕದ ಬೆಳವಣಿಗೆಯ ಮುಂದಿನ ಹಾದಿಯ ಕುರಿತು ನಾವು ಚರ್ಚೆ ನಡೆಸಿದೆವು’ ಎಂದಿದ್ದಾರೆ.

ಷಾ ಅವರು ಬೆಂಗಳೂರಿನ ಕಳಪೆ ಮೂಲಸೌಕರ್ಯ, ಅದರಲ್ಲೂ ರಸ್ತೆಗುಂಡಿ ಮತ್ತು ಕಸದ ನಿರ್ವಹಣೆ ಬಗ್ಗೆ ಇತ್ತೀಚೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದರು. ಇದು ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು.

ಷಾ ಅವರ ಟೀಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಡಿ.ಕೆ. ಶಿವಕುಮಾರ್, ‘ಉದ್ಯಮಿಗಳಿಗೆ ವೈಯಕ್ತಿಕ ಕಾರ್ಯ
ಸೂಚಿಗಳಿವೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇವರೆಲ್ಲ ಯಾಕೆ ಬಾಯಿ ಬಿಟ್ಟಿರಲಿಲ್ಲ’ ಎಂದು ಪ್ರಶ್ನಿಸಿದ್ದರು. ‘ಸರ್ಕಾರದಿಂದ ಎಲ್ಲ ಸವಲತ್ತು ಪಡೆದು ಬೆಳೆದವರು, ತಾವು ಬೆಳೆದ ನಗರಕ್ಕೆ ಧಕ್ಕೆ ತರಬಾರದು’ ಎಂದೂ ಹೇಳಿದ್ದರು.

ಶಿವಕುಮಾರ್ ಅವರ ‘ವೈಯಕ್ತಿಕ ಕಾರ್ಯಸೂಚಿ’ ಆರೋಪಕ್ಕೆ ‘ಎಕ್ಸ್‌’ನಲ್ಲಿ ತಿರುಗೇಟು ನೀಡಿದ್ದ ಷಾ, ‘ನಿಮ್ಮ ಮಾತು ಸತ್ಯವಲ್ಲ. ನಾವು ಹಿಂದಿನ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರಗಳ ಅವಧಿಯಲ್ಲೂ ನಗರದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದೇವೆ. ಸ್ವಚ್ಛ ಮತ್ತು ಸುಸ್ಥಿತಿಯಲ್ಲಿರುವ ರಸ್ತೆಗಳನ್ನು ಹೊಂದುವುದೇ ನಮ್ಮ ಕಾರ್ಯಸೂಚಿ’ ಎಂದಿದ್ದರು.

ಕಿರಣ್ ಮಜುಂದಾರ್ ಷಾ ಅವರು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ, ಬಿಜೆಪಿ ನಾಯಕರಾದ ಬಿ.ಎಸ್. ಯಡಿಯೂರಪ್ಪ, ಸಿ.ಎನ್. ಅಶ್ವತ್ಥನಾರಾಯಣ, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರನ್ನೂ ಭೇಟಿಯಾಗಿದ್ದರು. ಷಾ ಅವರು ತಮ್ಮ ಕುಟುಂಬದ ಸಮಾರಂಭವೊಂದಕ್ಕೆ ಆಮಂತ್ರಣ ನೀಡಲು ತಮ್ಮನ್ನು ಭೇಟಿಯಾಗಿದ್ದರು ಎಂದು ಅಶ್ವತ್ಥನಾರಾಯಣ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಈ ಹಿಂದೆ ಷಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಪ್ರಿಯಾಂಕ್‌ ಖರ್ಗೆ, ಬೆಂಗಳೂರಿನ ಯಾವ ಭಾಗವನ್ನು ಅವರು ನೋಡಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ಕಾಮಗಾರಿ ನಡೆಯುತ್ತಿದೆ. ಕ್ಷಿಪ್ರ ವೇಗದಲ್ಲಿ ಕೆಲಸ ನಡೆಯುತ್ತಿದ್ದು, ಮೂಲಸೌಕರ್ಯ ಅಭಿವೃದ್ಧಿಗೆ ಏನು ಅಗತ್ಯವಿದೆಯೋ  ಅದನ್ನು ನಾವು ಮಾಡುತ್ತಿದ್ದೇವೆ’ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.