ಬೆಂಗಳೂರು: ‘ಜಾತಿ ಮೇಲೆ ರಾಜಕೀಯ ಮಾಡಲು ನನಗೆ ಇಷ್ಟ ಇಲ್ಲ. ನಾನು ಕೆಪಿಸಿಸಿ ಅಧ್ಯಕ್ಷ. ಕಾಂಗ್ರೆಸ್ ಪಕ್ಷವೇ ನನಗೆ ಜಾತಿ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಸುದ್ದಿಗಾರರ ಜೊತೆ ಶುಕ್ರವಾರ ಮಾತನಾಡಿದ ಅವರು, ‘ನಾನು ಮೂಲತಃ ಕೃಷಿಕ. ನನ್ನ ತಂದೆ ತಾಯಿ ಒಕ್ಕಲಿಗರು. ಶಾಲೆಗೆ ಸೇರಿಸುವಾಗ ಒಕ್ಕಲಿಗ ಎಂದು ಕೊಟ್ಟಿದ್ದಾರೆ. ಆದರೆ, ಜಾತಿ ಮೇಲೆ ರಾಜಕೀಯ ಮಾಡಲ್ಲ’ ಎಂದರು.
ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ‘ಕುಮಾರಸ್ವಾಮಿ ನನ್ನ ಹೆಸರು ಹೇಳಿ ಟೀಕೆ ಮಾಡಿಲ್ಲ. ಅವರ ಪಕ್ಷ ಅವರದು, ನಮ್ಮ ಪಕ್ಷ ನಮ್ಮದು. ಅವರ ಕರ್ತವ್ಯ ಅವರು ಮಾಡುತ್ತಾರೆ. ನಮ್ಮ ಕರ್ತವ್ಯ ನಾವು ಮಾಡುತ್ತೇವೆ’ ಎಂದರು.
‘ಚುನಾವಣೆ ಸಂದರ್ಭದಲ್ಲಿ ಒಂದು ಪಕ್ಷ, ಬೇರೆ ಪಕ್ಷಗಳ ಮತ ಸೆಳೆಯುವುದು ಸಹಜ. ನಮ್ಮ ಮತಗಳನ್ನು, ಬಿಜೆಪಿ ಮತಗಳನ್ನು ಜೆಡಿಎಸ್ನವರು ಸೆಳೆಯುತ್ತಾರೆ. ಅದೇ ರೀತಿ ನಾವು ಕೂಡ ಬಿಜೆಪಿ, ಜೆಡಿಎಸ್ ಹಾಗೂ ಬೇರೆ ಪಕ್ಷಗಳ ಮತಗಳನ್ನು ಸೆಳೆಯಲು ಪ್ರಯತ್ನಿಸುತ್ತೇವೆ. ನಮ್ಮ ಅಭ್ಯರ್ಥಿ, ಪಕ್ಷದ ಸಿದ್ಧಾಂತ, ನಾಯಕತ್ವ ನೋಡಿ ಯಾರು ಪಕ್ಷಕ್ಕೆ ಬರುತ್ತಾರೊ ಅವರನ್ನು ನಾವು ಕರೆದುಕೊಳ್ಳುತ್ತಿದ್ದೇವೆ. ಚುನಾವಣೆ ಸಮಯದಲ್ಲಿ ಇಂಥ ರಾಜಕೀಯ ಸಹಜ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.