ADVERTISEMENT

ಡ್ರಿಂಕ್ ಆ್ಯಂಡ್ ಡ್ರೈವ್: ಸ್ಥಳದಲ್ಲಿ ದಂಡ ಪಾವತಿಗಿಲ್ಲ ಅವಕಾಶ

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 16:00 IST
Last Updated 30 ಜೂನ್ 2022, 16:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಮದ್ಯ ಕುಡಿದು ವಾಹನ ಚಲಾಯಿಸುವವರ ಪತ್ತೆಗೆ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು, ವಾಹನಗಳನ್ನು ಜಪ್ತಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸುತ್ತಿದ್ದಾರೆ.

'ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣಗಳಲ್ಲಿ ಸಿಕ್ಕಿಬೀಳುವವರಿಂದ ಕೆಲ ಪೊಲೀಸರು ಸ್ಥಳದಲ್ಲೇ ದಂಡ ಪಾವತಿ ಮಾಡಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ರಶೀದಿ ಸಹ ನೀಡದೇ ಅಕ್ರಮವಾಗಿ ದಂಡ ವಸೂಲಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ಜನರು ಸಾಮಾಜಿಕ ಮಾಧ್ಯಮಗಳ ಮೂಲಕ ಹಿರಿಯ ಅಧಿಕಾರಿಗಳಿಗೆ ದೂರು ನೀಡುತ್ತಿದ್ದಾರೆ.

ದೂರಿಗೆ ಸ್ಪಂದಿಸಿರುವ ಸಂಚಾರ ವಿಭಾಗದ ಹಿರಿಯ ಅಧಿಕಾರಿ, ‘ಸ್ಥಳದಲ್ಲಿ ದಂಡ ಪಾವತಿಗಿಲ್ಲ ಅವಕಾಶ. ಆಕಸ್ಮಾತ್ ಯಾರಾದರೂ ದಂಡ ಪಡೆದರೆ, ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು’ ಎಂದಿದ್ದಾರೆ.

ADVERTISEMENT

‘ಮದ್ಯ ಕುಡಿದು ವಾಹನ ಚಲಾಯಿಸುವವರ ವಿರುದ್ಧದ ಪ್ರಕರಣಗಳು ನ್ಯಾಯಾಲಯದಲ್ಲೇ ಇತ್ಯರ್ಥವಾಗಬೇಕು. ನಿಯಮ ಉಲ್ಲಂಘನೆಗೆ ನ್ಯಾಯಾಲಯದಲ್ಲೇ ದಂಡ ಪಾವತಿಸಬೇಕು’ ಎಂದೂ ಅಧಿಕಾರಿ ತಿಳಿಸಿದ್ದಾರೆ.

‘ಕಾರ್ಯಾಚರಣೆ ನಡೆಸುವ ಪೊಲೀಸರು, ಚಾಲಕ ಅಥವಾ ಸವಾರ ಮದ್ಯ ಕುಡಿದಿದ್ದು ಸಾಬೀತಾದರೆ ಕೂಡಲೇ ವಾಹನಗಳನ್ನು ಜಪ್ತಿ ಮಾಡಬೇಕು. ವಿವರ ಸಮೇತವಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು. ನ್ಯಾಯಾಲಯದ ಆದೇಶ ಬಂದ ಬಳಿಕವೇ ವಾಹನಗಳನ್ನು ಮಾಲೀಕರಿಗೆ ನೀಡಬೇಕೆಂದು ಪೊಲೀಸರಿಗೆ ಸೂಚನೆ ನೀಡಲಾಗಿದೆ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.