ADVERTISEMENT

ಡ್ರಗ್ಸ್ ವ್ಯಸನ: ಹಣ ಹೊಂದಿಸಲು ವಾಹನ ಕಳ್ಳತನ

​ಪ್ರಜಾವಾಣಿ ವಾರ್ತೆ
Published 17 ಜೂನ್ 2022, 16:13 IST
Last Updated 17 ಜೂನ್ 2022, 16:13 IST
ಆರೋಪಿಗಳಿಂದ ಜಪ್ತಿ ಮಾಡಲಾದ ದ್ವಿಚಕ್ರ ವಾಹನಗಳು
ಆರೋಪಿಗಳಿಂದ ಜಪ್ತಿ ಮಾಡಲಾದ ದ್ವಿಚಕ್ರ ವಾಹನಗಳು   

ಬೆಂಗಳೂರು: ಡ್ರಗ್ಸ್ ಹಾಗೂ ಮದ್ಯ ಖರೀದಿಗೆ ಹಣ ಹೊಂದಿಸುವುದಕ್ಕಾಗಿ ದ್ವಿಚಕ್ರ ವಾಹನ ಕದ್ದು ಮಾರುತ್ತಿದ್ದ ಮೂವರು ಆರೋಪಿಗಳನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ.

‘ಹೊರಮಾವು ವಿಜಯಾ ಬ್ಯಾಂಕ್ ಕಾಲೊನಿಯ ನಿತಿನ್ ಅಲಿಯಾಸ್ ಗುಂಗುರು ಕೂದಲು (23), ರಾಮಮೂರ್ತಿನಗರದ ಮಾರಪ್ಪ ಅಲಿಯಾಸ್ ಮಾದೇಶ (20) ಹಾಗೂ ಬಾಣಸವಾಡಿ ಬಿಎಸ್‌ಎನ್‌ಎಲ್‌ ಪಾರ್ಕ್‌ನ ಮನೋಜ್ ಅಲಿಯಾಸ್ ಎಮ್ಮೆ (20) ಬಂಧಿತರು. ಇವರಿಂದ ₹ 14.30 ಲಕ್ಷ ಮೌಲ್ಯದ 21 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದ ಆರೋಪಿಗಳು ಮೋಜು–ಮಸ್ತಿ ಮಾಡಲಾರಂಭಿಸಿದ್ದರು. ಗಾಂಜಾ ಹಾಗೂ ಮದ್ಯದ ವ್ಯಸನಿಯಾಗಿದ್ದರು. ಅದರ ಖರೀದಿಗಾಗಿ ಆರಂಭದಲ್ಲಿ ಜೇಬು ಕಳ್ಳತನ ಮಾಡುತ್ತಿದ್ದರು. ಬಂದ ಹಣದಲ್ಲಿ ಗಾಂಜಾ–ಮದ್ಯ ಖರೀದಿಸಿ ಸೇವಿಸುತ್ತಿದ್ದರು.’

ADVERTISEMENT

‘ಜೇಬು ಕಳ್ಳತನದಿಂದ ಬಂದ ಹಣವೂ ಸಾಲುತ್ತಿರಲಿಲ್ಲ. ಹೀಗಾಗಿ, ದ್ವಿಚಕ್ರ ವಾಹನ ಕಳ್ಳತನ ಮಾಡಲು ಮುಂದಾಗಿದ್ದರು. ಸಾರ್ವಜನಿಕ ಸ್ಥಳ ಹಾಗೂ ಮನೆ ಮುಂದೆ ನಿಲ್ಲಿಸುತ್ತಿದ್ದ ವಾಹನಗಳನ್ನು ಲಾಕ್‌ ಮುರಿದು ಕದಿಯುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಕದ್ದ ವಾಹನಗಳನ್ನು ಕಡಿಮೆ ಬೆಲೆಗೆ ಮಾರುತ್ತಿದ್ದ ಆರೋಪಿಗಳು, ಕೆಲ ದಿನ ಬಿಟ್ಟು ದಾಖಲೆ ನೀಡುವುದಾಗಿ ಹೇಳಿ ನಾಪತ್ತೆಯಾಗುತ್ತಿದ್ದರು. ಇದರಿಂದ ಬಂದ ಹಣವನ್ನು ವ್ಯಸನಕ್ಕೆ ಖರ್ಚು ಮಾಡುತ್ತಿದ್ದರು. ಕೆ.ಜಿ.ಹಳ್ಳಿ, ಕೆ.ಆರ್.ಪುರ, ಆವಲಹಳ್ಳಿ, ತಿಲಕ್‌ನಗರ, ಕಾಮಾಕ್ಷಿಪಾಳ್ಯ, ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲೂ ಆರೋಪಿಗಳು ದ್ವಿಚಕ್ರ ವಾಹನ ಕಳ್ಳತನ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.