ಬೊಮ್ಮನಹಳ್ಳಿ: ‘ರಾಜ್ಯದ ಜನಸಂಖ್ಯೆಯಲ್ಲಿ ಐದನೇ ಸ್ಥಾನದಲ್ಲಿರುವ ಈಡಿಗ ಸಮಾಜ ಮತ್ತು ಅದರ ಪಂಗಡಗಳನ್ನು ಪ್ರವರ್ಗ 1 ಕ್ಕೆ ಸೇರಿಸಲು ಸರ್ಕಾರ ಬದ್ಧ’ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬನ್ನೇರುಘಟ್ಟ ರಸ್ತೆ ಹುಳಿಮಾವು ಬಳಿ ಬಿಲ್ಲವ ಅಸೋಸಿಯೇಷನ್ ಭಾನುವಾರ ಆಯೋಜಿಸಿದ್ದ ನಾರಾಯಣಗುರುಗಳ 165 ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು.
ನಾರಾಯಣ ಗರುಗಳು ಅಸ್ಪೃಶ್ಯತೆ ವಿರುದ್ಧ ನಡೆಸಿದ ಸಾಮಾಜಕ ಆಂದೋಲನದಿಂದ ಇಂದು ತಾರತಮ್ಯದಿಂದ ಆಚೆ ಬಂದಿದ್ದೇವೆ. ನಮ್ಮ ಪೂರ್ವಜರು ನಡೆಸಿದ ಹೋರಾಟದ ಇತಿಹಾಸವನ್ನು ನೆನಪಿಸಿಕೊಳ್ಳುತ್ತಲೇ, ಇಂದಿನ ತಲೆಮಾರಿಗೆ ಈ ಇತಿಹಾಸವನ್ನು ತಿಳಿಸುವ ಕೆಲಸವೂ ಆಗಬೇಕು ಎಂದರು.
ಇದಕ್ಕೂ ಮೊದಲು ನಾರಾಯಣಗುರು ಹೆಸರಿನ ಗ್ರಂಥಾಲಯವನ್ನು ಲೇಖಕ ಗೋಪಾಲಕೃಷ್ಣ ಉದ್ಘಾಟಿಸಿದರು.
ಬೆಳ್ತಂಗಡಿಯ ನೆರೆಸಂತ್ರಸ್ತ ಆರು ಕುಟುಂಬಗಳಿಗೆ ₹2.5 ಲಕ್ಷ ಸಹಾಯಧನ ವಿತರಿಸಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಕ್ರಮವಾಗಿ ಜ್ಯೋತಿಕಾ ಎನ್. (ಶೇ 99.04) ಹಾಗೂ ಆಯುಷ್ ಎಸ್. ಪೂಜಾರಿ (ಶೇ 98.75) ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. 70 ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಸ್ವಯಂಪ್ರೇರಿತ ರಕ್ತದಾನ ಶಿಬಿರ, ಆರೋಗ್ಯ ಶಿಬಿರ ಏರ್ಪಡಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.