ADVERTISEMENT

ಈಜಿಪುರ: ಜಾಗ ಗುರುತು ಮಾಡಿ ಕೆಲಸ ಆರಂಭಿಸಿ– ಅಧಿಕಾರಿಗಳಿಗೆ ಮಹೇಶ್ವರ್ ರಾವ್ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 19:47 IST
Last Updated 26 ಜನವರಿ 2026, 19:47 IST
ಎಂ. ಮಹೇಶ್ವರ ರಾವ್‌
ಎಂ. ಮಹೇಶ್ವರ ರಾವ್‌   

ಬೆಂಗಳೂರು: ಈಜಿಪುರ ಮೇಲ್ಸೇತುವೆಗೆ ಸಂಬಂಧಿಸಿದಂತೆ ಸಂಚಾರಿ ಪೊಲೀಸ್ ವಿಭಾಗ, ಸೇಂಟ್ ಜಾನ್ಸ್ ರಾಷ್ಟ್ರೀಯ ಆರೋಗ್ಯ ವಿಜ್ಞಾನ ಅಕಾಡೆಮಿಯ ಜೊತೆ ಸೋಮವಾರ ಸಭೆ ನಡೆಸಿದ್ದು ಮೇಲ್ಸೇತುವೆಗೆ ವೇಗ ಸಿಗುವ ನಿರೀಕ್ಷೆ ಇದೆ. 

ಸೇಂಟ್‌ ಜಾನ್ಸ್‌ ಸಂಸ್ಥೆಯು ಪೋರ್ಟಲ್‌ ಪಿಯರ್‌ (ಸೇತುಬಂಧ) ನಿರ್ಮಿಸಲು ಜಮೀನು ಒದಗಿಸುವ ಭರವಸೆ ನೀಡಿದೆ.

ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್‌ ಮಾತನಾಡಿ, ‘ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದೆ. ‘ಕೇಂದ್ರೀಯ ಸದನ’ ಸಂಕೀರ್ಣದ ಕಡೆಯಿಂದ ಈಜೀಪುರ ಕಡೆಗೆ ಸಾಗುವ ಎಡ ಭಾಗದಲ್ಲಿ ಸೇಂಟ್‌ ಜಾನ್ಸ್ ಬಳಿ ಐದು ಪೋರ್ಟಲ್ ಪಿಯರ್ ಅಳವಡಿಸಲು ಸಂಸ್ಥೆಯ ಸ್ವಲ್ಪ ಜಾಗದ ಬಳಕೆ ಅವಶ್ಯಕತೆಯಿತ್ತು. ಈ ಬಗ್ಗೆ ಸೇಂಟ್‌ ಜಾನ್ಸ್‌ ಸಂಸ್ಥೆಯ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದಾಗ ಅವರು ಸಮ್ಮತಿ ನೀಡಿದ್ದಾರೆ. ಅದರಂತೆ ಕೂಡಲೇ ಗುರುತು ಮಾಡಿ ಕಾಮಗಾರಿ ಆರಂಭಿಸಬೇಕು’ ಎಂದು ಎಂಜಿನಿಯರ್‌ ಮತ್ತು ಗುತ್ತಿಗೆದಾರರಿಗೆ ತಿಳಿಸಿದರು.

ADVERTISEMENT

ಸೇಂಟ್‌ ಜಾನ್ಸ್ ಭಾಗದಲ್ಲಿ ರ‍್ಯಾಂ‍ಪ್‌ ನಿರ್ಮಿಸಲು ಭೂಸ್ವಾಧೀನ ಪಡಿಸಿಕೊಳ್ಳುವ ಜಾಗಕ್ಕೆ ಟಿಡಿಆರ್ ನೀಡುವ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಸಾಧ್ಯವಾದಷ್ಟು ಬೇಗ ಜಮೀನು ಹಸ್ತಾಂತರ ಮಾಡಿಕೊಂಡು ಕಾಮಗಾರಿಯನ್ನು ಶೀಘ್ರವಾಗಿ ನಡೆಸಬೇಕು ಎಂದು ಹೇಳಿದರು.

ಕಾಮಗಾರಿ ನಡೆಯುವ ವೇಳೆ ಸುರಕ್ಷತಾ ಕ್ರಮವಾಗಿ ಬ್ಯಾರಿಕೇಡ್‌ಗಳನ್ನು ಅಳವಡಿಸಬೇಕು. ಕಾಮಗಾರಿ ಪೂರ್ಣಗೊಂಡ ಕೂಡಲೇ ಗೋಡೆ ನಿರ್ಮಿಸಿಕೊಡಲು ಸಲಹೆ ನೀಡಿದರು.

ಮುಖ್ಯ ಎಂಜಿನಿಯರ್‌ ರಾಘವೇಂದ್ರ ಪ್ರಸಾದ್ ಮಾತನಾಡಿ, ‘ಈಜಿಪುರ ಮುಖ್ಯ ರಸ್ತೆಯಲ್ಲಿ 2.38 ಕಿ.ಮೀ ಉದ್ದದ ಮೇಲ್ಸೇತುವೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸಲಾಗುತ್ತಿದೆ. ಮೇಲ್ಸೇತುವೆಗೆ ಒಟ್ಟು 762 ಸೆಗ್ಮೆಂಟ್‌ ಕಾಸ್ಟಿಂಗ್ ಮಾಡಬೇಕಿದ್ದು, ಈಗಾಗಲೇ 645 ಸೆಗ್ಮೆಂಟ್‌ಗಳನ್ನು ಕಾಸ್ಟಿಂಗ್ ಮಾಡಲಾಗಿದೆ. ಇನ್ನು 117 ಸೆಗ್ಮೆಂಟ್‌ಗಳನ್ನು ಕಾಸ್ಟಿಂಗ್ ಮಾಡಬೇಕಿದೆ. ಜೊತೆಗೆ 490 ಸೆಗ್ಮೆಂಟ್‌ಗಳನ್ನು ಜೋಡಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸಂಚಾರ ಪೊಲೀಸ್ ವಿಭಾಗದ ಜಂಟಿ ಆಯುಕ್ತ ಕಾರ್ತಿಕ್ ರೆಡ್ಡಿ, ಸೇಂಟ್ ಜಾನ್ಸ್ ರಾಷ್ಟ್ರೀಯ ಆರೋಗ್ಯ ವಿಜ್ಞಾನ ಅಕಾಡೆಮಿಯ ನಿರ್ದೇಶಕ ಧರ್ಮಗುರು ಜೆಸುದಾಸ್ ಆರ್., ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.