
ಬೆಂಗಳೂರು: ನಗರದ ರಿಚ್ಮಂಡ್ ವೃತ್ತದ ಬಳಿಯಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಒ) ಸ್ಟಾಫ್ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿಯಲ್ಲಿ ಹಣದ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಕಬ್ಬನ್ಪಾರ್ಕ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ರಾತ್ರಿ ಎಫ್ಐಆರ್ ದಾಖಲಾಗಿದೆ.
ಸಿಇಒ ಗೋಪಿ ಹಾಗೂ ಲೆಕ್ಕಾಧಿಕಾರಿ ಜಗದೀಶ್ ಅವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ಹೇಳಿದರು. ಸೊಸೈಟಿಯ ಅಧ್ಯಕ್ಷ ಸಿ.ಜೆ.ಮುರುಳೀಧರ್ ಅವರು ದೂರು ನೀಡಿದ್ದರು ಎಂಬುದು ಗೊತ್ತಾಗಿದೆ.
ಸೊಸೈಟಿ ಖಾತೆ ಪರಿಶೀಲನೆ ನಡೆಸಿದಾಗ ಕೆಲವು ಖಾತೆಗಳಿಗೆ ಅನಧಿಕೃತವಾಗಿ ಹಣ ವರ್ಗಾವಣೆ ಆಗಿರುವುದು ಕಂಡಬಂದಿದೆ ಎಂದು ದೂರು ನೀಡಿದ್ದಾರೆ. ಸೊಸೈಟಿಯ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದರು.
ಸೊಸೈಟಿನಲ್ಲಿ ಹೂಡಿಕೆ ಮಾಡಿದ್ದ ಹಣಕ್ಕೆ ಪ್ರತಿ ತಿಂಗಳು ಬಡ್ಡಿ ಖಾತೆಗೆ ಬರುತ್ತಿತ್ತು. ಮೂರು ತಿಂಗಳಿಂದ ಹಣ ಬಂದಿಲ್ಲ. ಪರಿಶೀಲನೆ ನಡೆಸಿದಾಗ ವಂಚನೆ ನಡೆದಿರುವುದು ಗೊತ್ತಾಗಿದೆ ಎಂದು ಹೂಡಿಕೆದಾರರೊಬ್ಬರು ಹೇಳಿದರು.
ನೂರಾರು ಉದ್ಯೋಗಿಗಳು ತಮ್ಮ ಸಂಬಳದ ಸ್ವಲ್ಪ ಭಾಗವನ್ನು ಹೂಡಿಕೆ ಮಾಡಿದ್ದರು. ಭವಿಷ್ಯದಲ್ಲಿ ಆ ಹಣವು ನೆರವಿಗೆ ಬರಲಿದೆ ಎಂದು ಅವರು ಭಾವಿಸಿದ್ದರು. ಆದರೆ, ಇದೀಗ ಸೊಸೈಟಿ ಖಾತೆಯೇ ಖಾಲಿಯಾಗಿದೆ. ಉಳಿತಾಯದ ಹಣವೇ ಇಲ್ಲವಾಗಿದೆ ಎಂದು ಹೂಡಿಕೆದಾರ ಬಿ.ಮಹದೇವಯ್ಯ ಅವರು ನೋವು ತೋಡಿಕೊಂಡರು.
‘ಎಫ್ಐಆರ್ ದಾಖಲಾದ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಮೂಲಗಳು ಹೇಳಿವೆ.
‘ಇಪಿಎಫ್ಒ ಉದ್ಯೋಗಿಗಳಿಗೆ ಮಾತ್ರ ಸೊಸೈಟಿಯಲ್ಲಿ ಹೂಡಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ನಾನೂ ಎರಡು ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದೆ. ಆರು ತಿಂಗಳ ಹಿಂದೆ ನಾನು ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಹೂಡಿಕೆ ಹಣ ದುರುಪಯೋಗ ಆಗಿರುವುದು ಗೊತ್ತಾಯಿತು. ಇದೀಗ ದೂರು ನೀಡಲಾಗಿದೆ’ ಎಂದು ಅಧ್ಯಕ್ಷ ಮುರಳೀಧರ್ ತಿಳಿಸಿದರು.
61 ವರ್ಷದ ಹಿಂದೆ ಇಪಿಎಫ್ಒ ಸಿಬ್ಬಂದಿ ‘ಇಪಿಎಫ್ಒ ಸ್ಟಾಫ್ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿ’ ರಚಿಸಿಕೊಂಡಿದ್ದರು. ಉಳಿತಾಯದ ಹಣವನ್ನು ಹೂಡಿಕೆ ಮಾಡುತ್ತಿದ್ದರು. ಅವಶ್ಯ ಇರುವ ಸಿಬ್ಬಂದಿಗೆ ಈ ಸೊಸೈಟಿ ಸಾಲ ನೀಡುತ್ತಿತ್ತು. ಶುಕ್ರವಾರ ಹಾಗೂ ಶನಿವಾರ ಕಬ್ಬನ್ಪಾರ್ಕ್ ಪೊಲೀಸ್ ಠಾಣೆಗೆ ಹೂಡಿಕೆದಾರರು ಬಂದಿದ್ದರು. ತನಿಖಾಧಿಕಾರಿಗಳ ಎದುರು ತಮ್ಮ ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.