ADVERTISEMENT

ರಾಜ್ಯದಲ್ಲಿ ₹ 2.87ಲಕ್ಷ ಕೋಟಿ ಹೂಡಿಕೆ

‘ಎಕ್ಸ್‌ಕಾನ್‌’ ಕಟ್ಟಡ ನಿರ್ಮಾಣ ಉಪಕರಣಗಳ ವಸ್ತುಪ್ರದರ್ಶನದಲ್ಲಿ ಯಡಿಯೂರಪ್ಪ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 19:56 IST
Last Updated 10 ಡಿಸೆಂಬರ್ 2019, 19:56 IST
ಮೂಲಸೌಕರ್ಯ ನಿರ್ಮಾಣ ವಲಯದಲ್ಲಿ ಸಾಧನೆ ಮಾಡಿದ ಸಂಯುಕ್ತಾ ದಾಸ್‌ಗುಪ್ತಾ ಹಾಗೂ ರಜನಿ ಪ್ರಧಾನ್‌ ಅವರಿಗೆ ‘ಸಮಾನ ಅವಕಾಶ ಪ್ರಶಸ್ತಿ’ಯನ್ನು ಬಿ.ಎಸ್. ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಪ್ರದಾನ ಮಾಡಿದರು  –ಪ್ರಜಾವಾಣಿ ಚಿತ್ರ
ಮೂಲಸೌಕರ್ಯ ನಿರ್ಮಾಣ ವಲಯದಲ್ಲಿ ಸಾಧನೆ ಮಾಡಿದ ಸಂಯುಕ್ತಾ ದಾಸ್‌ಗುಪ್ತಾ ಹಾಗೂ ರಜನಿ ಪ್ರಧಾನ್‌ ಅವರಿಗೆ ‘ಸಮಾನ ಅವಕಾಶ ಪ್ರಶಸ್ತಿ’ಯನ್ನು ಬಿ.ಎಸ್. ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಪ್ರದಾನ ಮಾಡಿದರು  –ಪ್ರಜಾವಾಣಿ ಚಿತ್ರ   

ಬೆಂಗಳೂರು:‘ವಿದೇಶಿ ನೇರ ಹೂಡಿಕೆಯಲ್ಲಿ ದೇಶದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. 2020ರ ಏಪ್ರಿಲ್‍ನಲ್ಲಿ ₹ 2.87ಲಕ್ಷ ಕೋಟಿ ಬಂಡವಾಳ ಹರಿದು ಬರಲಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ವತಿಯಿಂದ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಏರ್ಪಡಿಸಿರುವ ಕಟ್ಟಡ ನಿರ್ಮಾಣ ಸಲಕರಣೆಗಳು ಹಾಗೂ ತಂತ್ರಜ್ಞಾನ ಕುರಿತ ಅಂತರರಾಷ್ಟ್ರೀಯ ಮೇಳ ‘ಎಕ್ಸ್‌ಕಾನ್‌’ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಟ್ಟಡ ನಿರ್ಮಾಣ ವಲಯದಲ್ಲಿನ ಕೈಗಾರಿಕೆಗಳಿಗೆ ರಾಜ್ಯದಲ್ಲಿ ವಿಪುಲ ಅವಕಾಶಗಳಿವೆ. ನಿರ್ಮಾಣ ಕಾಮಗಾರಿ ಗಳ ತಂತ್ರಜ್ಞಾನದಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ಇನ್ನಷ್ಟು ಯೋಜನೆಗಳ ಮೂಲಕ ಈ ನಗರವನ್ನು ನಿರ್ಮಾಣ ಕಾಮಗಾರಿ ಸಲ ಕರಣೆ ಹಾಗೂ ತಂತ್ರಜ್ಞಾನದ ರಾಜಧಾನಿಯನ್ನಾಗಿ ರೂಪಿಸಲಿದ್ದೇವೆ’ ಎಂದು ಅವರು ತಿಳಿಸಿದರು.

ADVERTISEMENT

ಸಿಐಐ ಅಧ್ಯಕ್ಷ ವಿಕ್ರಂ ಕಿರ್ಲೋಸ್ಕರ್‌, ‘ರಸ್ತೆ ನಿರ್ಮಾಣ ವಲಯದಲ್ಲಿ ಕೇಂದ್ರ ಸರ್ಕಾರವು ಹೆಚ್ಚು ಹೂಡಿಕೆ ಮಾಡುತ್ತಿರುವುದರಿಂದ, ವಹಿವಾಟು ವೆಚ್ಚವು ಕಡಿಮೆಯಾಗಲಿದೆ. ಕಟ್ಟಡ ನಿರ್ಮಾಣ ಉಪಕರಣಗಳ ಕೈಗಾರಿಕೆಯು ಸದ್ಯ ಕಠಿಣ ಪರಿಸ್ಥಿತಿ ಎದುರಿಸುತ್ತಿದೆ’ ಎಂದು ತಿಳಿಸಿದರು.

ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್‌ಜಿ, ‘ಭಾರತವು ಸದ್ಯ ಜಿಡಿಪಿಯ ಶೇ 5 ರಷ್ಟನ್ನು ಮೂಲಸೌಕರ್ಯ ಅಭಿವೃದ್ಧಿಗೆ ವಿನಿಯೋಗಿಸುತ್ತಿದೆ. ಇದನ್ನು ಕನಿಷ್ಠ
ಶೇ 6ಕ್ಕೆ ಏರಿಸಬೇಕು. ಚೀನಾವು ಮೂಲ ಸೌಕರ್ಯ ಅಭಿವೃದ್ಧಿಗೆ ತನ್ನ ಜಿಡಿಪಿಯ ಶೇ 6ರಷ್ಟನ್ನು ಖರ್ಚು ಮಾಡುತ್ತಿದೆ’ ಎಂದರು.

ಡಿಸೆಂಬರ್ 14ರವರೆಗೆ ಎಕ್ಸ್‌ಕಾನ್‌ ನಡೆಯಲಿದೆ.

ಬೆಮೆಲ್‌ನಿಂದ ಹೈಡ್ರಾಲಿಕ್‌ ಎಸ್ಕವೇಟರ್‌

ಬೆಮೆಲ್‌ ಅಭಿವೃದ್ಧಿಪಡಿಸಿರುವ ‘ಬಿಇ210ಎಲ್‌ಸಿ’ ನೂತನ ಹೈಡ್ರಾಲಿಕ್‌ ಎಸ್ಕವೇಟರ್‌ ಯಂತ್ರವನ್ನು ಬೆಮೆಲ್‌ನ ನಿರ್ದೇಶಕ (ರಕ್ಷಣೆ) ಆರ್.ಎಚ್. ಮುರಳೀಧರ ಅನಾವರಣಗೊಳಿಸಿದರು. ಮತ್ತೊಬ್ಬ ನಿರ್ದೇಶಕ ಎಂ.ವಿ. ರಾಜಶೇಖರ (ಗಣಿ ಮತ್ತು ನಿರ್ಮಾಣ) ಹಾಗೂ ಇತರೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಇಂಧನ ಕ್ಷಮತೆಯುಳ್ಳ ಈ ‘ಬಿಇ210ಎಲ್‌ಸಿ’ ಯಂತ್ರ 21 ಸಾವಿರ ಕೆ.ಜಿ ತೂಕವನ್ನು ಹೊರುವ ಸಾಮರ್ಥ್ಯ ಹೊಂದಿದೆ. ಕಟ್ಟಡ ನಿರ್ಮಾಣ ಮತ್ತು ಉತ್ಖನನ ಕಾರ್ಯಕ್ಕೆ ಅತ್ಯಂತ ಸೂಕ್ತವಾಗಿದೆ ಎಂದು ಬೆಮೆಲ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.