ಬೆಂಗಳೂರು: ಶೇ 50 ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲಿಡದ 7 ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮಕ್ಕೆ ಬಿಬಿಎಂಪಿ ಮುಂದಾಗಿದ್ದು, ಶೋಕಾಸ್ ನೋಟಿಸ್ ನೀಡಿದೆ.
ಆರ್ಟ್ಯಮ್ ಆಸ್ಪತ್ರೆ, ರಂಗದೊರೈ ಸ್ಮಾರಕ ಆಸ್ಪತ್ರೆ, ಸಂಜೀವಿನಿ ಆಸ್ಪತ್ರೆ, ಡಾ. ಜಿವಿಜಿ ಹೆಲ್ತ್ಕೇರ್ ಪ್ರೈವೆಟ್ ಲಿಮಿಟೆಡ್, ಶ್ರೀನಿವಾಸ ಆಸ್ಪತ್ರೆ, ಮೆಡ್ಸ್ಟಾರ್ ಆಸ್ಪತ್ರೆ, ನಂದನಾ ಹೆಲ್ತ್ಕೇರ್ ಸರ್ವೀಸಸ್ ಇಂಡಿಯಾ ಲಿಮಿಟೆಡ್ ಆಸ್ಪತ್ರೆಗಳಿಗೆ ನೋಟಿಸ್ ನೀಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.
‘ಸಾಮಾನ್ಯ ಕೊಠಡಿಗಳು, ತೀವ್ರ ನಿಗಾ ಘಟಕ (ಐಸಿಯು), ಹೈ ಡಿಪೆಂಡೆನ್ಸಿ ಯುನಿಟ್ (ಎಚ್ಡಿಯು), ವೆಂಟಿಲೇಟರ್ ಸೌಲಭ್ಯ ಇರುವ ಐಸಿಯುಗಳಲ್ಲಿ ಶೇ 50ರಷ್ಟು ಹಾಸಿಗೆ ಕಾಯ್ದಿರಿಸಬೇಕು ಎಂಬ ಪಾಲಿಕೆ ನಿರ್ದೇಶನವನ್ನು ಈ ಆಸ್ಪತ್ರೆಗಳು ಪಾಲಿಸಿಲ್ಲ. ಪರವಾನಗಿ ಅಮಾನತು ಮಾಡಬಾರದೇಕೆ ಎಂದು ಕಾರಣ ಕೇಳಿ ನೋಟಿಸ್ ನೀಡಲಾಗಿದೆ’ ಎಂದು ವಿವರಿಸಿದ್ದಾರೆ.
‘24 ಗಂಟೆಗಳಲ್ಲಿ ಹಾಸಿಗೆಗಳನ್ನು ಕಾಯ್ದಿರಿಸಿ ವಿವರಣೆ ಸಲ್ಲಿಸದೇ ಇದ್ದರೆ ಪರವಾನಗಿ ಅಮಾನತು ಮಾಡಲಾಗುವುದು. ಮೊದಲ ಹಂತದಲ್ಲಿ ಹೊರ ರೋಗಿಗಳ ತಪಾಸಣಾ ವಿಭಾಗ ಮುಚ್ಚಲಾಗುವುದು. ನಂತರ ಒಳರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಿ ಬಾಗಿಲು ಮುಚ್ಚಲಾಗುವುದು’ ಎಂದು ಆಸ್ಪತ್ರೆಗಳಿಗೆ ಎಚ್ಚರಿಕೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.