ADVERTISEMENT

ಬೆಂಗಳೂರು | ಹಣದ ಮಳೆ ಸುರಿಸುವುದಾಗಿ ವಂಚನೆ: ಹತ್ತು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 15:36 IST
Last Updated 4 ನವೆಂಬರ್ 2025, 15:36 IST
ಬಸವರಾಜ್  
ಬಸವರಾಜ್     

ಬೆಂಗಳೂರು: ಪೂಜೆಯ ನೆಪದಲ್ಲಿ ₹2 ಸಾವಿರ ಮುಖಬೆಲೆಯ ನೋಟುಗಳ ಮಳೆ ಸುರಿಸುವುದಾಗಿ ಸಾರ್ವಜನಿಕರನ್ನು ನಂಬಿಸಿ ವಂಚಿಸುತ್ತಿದ್ದ 10 ಮಂದಿಯನ್ನು ಹಲಸೂರು ಗೇಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಆರೋಪಿಗಳಾದ ಕೆ.ಮೋಹನ್‌, ಶ್ರೀನಿವಾಸಮೂರ್ತಿ, ರಾಜು, ಬಸವರಾಜ್ ಅಲಿಯಾಸ್ ಸತ್ಯಾನಂದ ಸ್ವಾಮಿ, ಮುನಿಶಾಮಪ್ಪ ಅಲಿಯಾಸ್ ಮೋಹನ್‌, ಮಲ್ಲಿಕಾರ್ಜುನ್‌, ರಾಮಕೃಷ್ಣ, ಪಾಲಿ ಮುರಳೀಧರ್, ರಾಮಚಂದ್ರ, ಮುಬಾರಕ್‌ ಎಂಬುವವರನ್ನು ಬಂಧಿಸಲಾಗಿದೆ.

ಆರೋಪಿಗಳಿಂದ ₹2 ಸಾವಿರ ಮುಖಬೆಲೆಯ ₹18 ಲಕ್ಷ ಮೌಲ್ಯದ ನೋಟುಗಳು, ಸ್ಕ್ರೀನ್ ಫಿಲಂ ಪ್ರಿಂಟ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ಚಲಾವಣೆಯಿಂದ ಹಿಂಪಡೆಯಲಾದ ಎರಡು ಸಾವಿರ ಮುಖಬೆಲೆಯ 70 ಅಸಲಿ ನೋಟುಗಳ ಸಿರೀಸ್ ನಂಬರ್‌ ತಿರುಚಿ ಬ್ಯಾಂಕ್‌ಗೆ ಸಲ್ಲಿಕೆ ಆಗಿರುವ ಸಂಬಂಧ ಹಲಸೂರು ಗೇಟ್ ಠಾಣೆ ಪೊಲೀಸರಿಗೆ ಆರ್‌ಬಿಐ ವ್ಯವಸ್ಥಾಪಕರು ಅಕ್ಟೋಬರ್‌ 17ರಂದು ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಆ ನೋಟುಗಳನ್ನು ಬ್ಯಾಂಕ್‌ಗೆ ಜಮೆ ಮಾಡಿದ್ದ ಕಬ್ಬನ್‌ಪೇಟೆಯಲ್ಲಿ ನೆಲಸಿದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಕಮಿಷನ್ ಆಸೆಗೆ ಕೃತ್ಯ ಎಸಗಿರುವುದು ಗೊತ್ತಾಗಿತ್ತು. ತನಿಖೆ ಮುಂದುವರಿಸಿದಾಗ ನಕಲಿ ಸ್ವಾಮೀಜಿಗಳ ತಂತ್ರ ಬಯಲಾಯಿತು ಎಂದು ಪೊಲೀಸರು ಹೇಳಿದರು.

ಆರೋಪಿಗಳ ಪೈಕಿ ಬಸವರಾಜ್, ಮಲ್ಲಿಕಾರ್ಜುನ್ ಹಾಗೂ ಮುನಿಶಾಮಪ್ಪ ಸ್ವಾಮೀಜಿಗಳ ವೇಷ ಧರಿಸಿಕೊಂಡು ಶ್ರೀಮಂತರನ್ನು ಭೇಟಿ ಮಾಡುತ್ತಿದ್ದರು. ಈ ಮೂವರು ನಕಲಿ ಸ್ವಾಮೀಜಿಗಳು, ಸಾರ್ವಜನಿಕರಿಗೆ ಪೂಜೆ ಮಾಡಿಸುವ ನೆಪದಲ್ಲಿ ಚಲಾವಣೆಯಿಂದ ಹಿಂದಕ್ಕೆ ಪಡೆಯಲಾಗಿರುವ 2018ರಲ್ಲಿ ಮುದ್ರಿತವಾಗಿರುವ ಸಿರೀಸ್ ಎಂಎನ್‌ಒಪಿಜಿ ಹೊರತುಪಡಿಸಿ ₹2 ಸಾವಿರ ಮುಖಬೆಲೆಯ ನೋಟುಗಳನ್ನು ನೀಡಿದಲ್ಲಿ ಅವುಗಳಿಗೆ ನೂರುಪಟ್ಟು ಹಣವನ್ನು ನೀಡಲಾಗುವುದು (ಹಣದ ಮಳೆ) ಎಂದು ನಂಬಿಸುತ್ತಿದ್ದರು.
₹2 ಸಾವಿರ ಮುಖಬೆಲೆಯ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳದೇ ಇನ್ನೂ ಮನೆಯಲ್ಲಿ ಇಟ್ಟುಕೊಂಡವರು ಈ ಆಮಿಷಕ್ಕೆ ಒಳಗಾಗುತ್ತಿದ್ದರು ಎಂದು ಪೊಲೀಸರು ಹೇಳಿದರು.

ಹಣದ ಮಳೆ ಸುರಿಸುವ ಸ್ಥಳವನ್ನೂ ಆರೋಪಿಗಳೇ ಹೇಳುತ್ತಿದ್ದರು. ಪೂಜೆ ಮಾಡಬೇಕು. ಸ್ಥಳಕ್ಕೆ ಒಬ್ಬರೇ ಬರಬೇಕೆಂದು ಆರೋಪಿಗಳು ಷರತ್ತು ವಿಧಿಸುತ್ತಿದ್ದರು. ಬಳಿಕ ನದಿ, ಕೆರೆಗಳ ಬಳಿಗೆ ಜನರನ್ನು ಕರೆದೊಯ್ದು ನಕಲಿ ಸ್ವಾಮೀಜಿಗಳು ಕೃತ್ಯ ಎಸಗುತ್ತಿದ್ದರು ಎಂದು ಪೊಲೀಸರು ಹೇಳಿದರು.

‘ನೀವು ನೀಡಿದ ನೋಟುಗಳು ಮುಕ್ಕಾಗಿವೆ. ಹೊಳೆಯಲ್ಲಿ ಮುಳುಗಿ ಏಳಬೇಕು’ ಎಂಬುದಾಗಿ ಸ್ವಾಮೀಜಿಗಳು ಸೂಚಿಸುತ್ತಿದ್ದರು. ‌ನೀರಿನಲ್ಲಿ ಮುಳುಗಿ ಏಳುವಷ್ಟರಲ್ಲಿ ದುಡ್ಡಿನೊಂದಿಗೆ ನಕಲಿ ಸ್ವಾಮೀಜಿಗಳು ಪರಾರಿ ಆಗುತ್ತಿದ್ದರು’ ಎಂದು ಪೊಲೀಸರು ಹೇಳಿದರು.

ನೋಟಿನ ಮೇಲಿರುವ ಕ್ರಮ ಸಂಖ್ಯೆ, ಸಿರೀಸ್ ಹಾಗೂ ಮುದ್ರಿತ ವರ್ಷವನ್ನು ಯಶವಂತಪುರದಲ್ಲಿ ನೆಲಸಿದ್ದ ಮುಬಾರಕ್‌ ಬದಲಾವಣೆ ಮಾಡುತ್ತಿದ್ದ. ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

‘₹2 ಸಾವಿರ ಮುಖಬೆಲೆಯ ಲಕ್ಕಿ ಸಿರೀಸ್ ನಮ್ಮ ಬಳಿಯಿದೆ. ಈ ಹಣವನ್ನು ಮನೆಯಲ್ಲಿ ಇಟ್ಟುಕೊಂಡರೆ ಇನ್ನೂ ಶ್ರೀಮಂತರಾಗಬಹುದು ಎಂದೂ ಆರೋಪಿಗಳು ನಂಬಿಸುತ್ತಿದ್ದರು. ಲಕ್ಕಿ ಸಿರೀಸ್‌ನ ನಂಬರಿನ ನೋಟಿಗೆ ₹1 ಲಕ್ಷಕ್ಕೆ ₹2 ಲಕ್ಷ ಪಡೆದು ಪರಾರಿ ಆಗುತ್ತಿದ್ದರು’ ಎಂದು ಪೊಲೀಸರು ಹೇಳಿದರು.

ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಎಂ. ಹಾಕೆ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. 

ಎಲ್ಲೆಲ್ಲಿ ಆರೋಪಿಗಳ ಬಂಧನ?

ಕಬ್ಬನ್‌ಪೇಟೆ ಮೆಜೆಸ್ಟಿಕ್‌ ಯಶವಂತಪುರ ಹಾಗೂ ಆಂಧ್ರಪ್ರದೇಶದ ವಿವಿಧೆಡೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

ವಂಚನೆ ಜಾಲ ವಿಸ್ತರಣೆ 

ಈ ರೀತಿ ವಂಚಿಸಿದ ನೋಟುಗಳನ್ನು ಮಧ್ಯವರ್ತಿಗಳ ಮೂಲಕ ಆರ್‌ಬಿಐಗೆ ಜಮೆ ಮಾಡಿಸಿ ₹ 20 ಸಾವಿರ ₹30 ಸಾವಿರ ಕಡಿಮೆ ಹಣ ಪಡೆದುಕೊಳ್ಳುತ್ತಿದ್ದರು. ಬೆಂಗಳೂರು ಯಾದಗಿರಿ ಹಾವೇರಿ ಆಂಧ್ರಪ್ರದೇಶ ತಮಿಳುನಾಡಿನಲ್ಲೂ ಈ ಜಾಲ ವಿಸ್ತರಿಸಿಕೊಂಡಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.

ಮಲ್ಲಿಕಾರ್ಜುನ್‌ 
ಮುನಿಶಾಮಪ್ಪ
ಮುಬಾರಕ್‌ 
ಮುರಳೀಧರ್‌
ಮೋಹನ್‌ 
ರಾಜು 
ರಾಮಕೃಷ್ಣ 
ರಾಮಚಂದ್ರ 
ಶ್ರೀನಿವಾಸ್‌ಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.