ಕಡತ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಜಿಪಿಎ ಹಾಗೂ ಕರಾರು ಒಪ್ಪಂದ ತಯಾರು ಮಾಡಿಕೊಂಡಿದ್ದ ಆರೋಪಿಗಳ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೈಸ್ ಸಂಸ್ಥೆಯವರು ನೀಡಿದ ದೂರಿನ ಮೇರೆಗೆ ಕೆ.ವಿ.ಚಂದ್ರನ್ ಹಾಗೂ ಇತರರ ವಿರುದ್ಧ ಗುರುವಾರ ಪ್ರಕರಣ ದಾಖಲಾಗಿದೆ.
ಉತ್ತರ ತಾಲ್ಲೂಕು, ಯಶವಂತಪುರ ಹೋಬಳಿಯ ಕೊಡಿಗೇಹಳ್ಳಿ ಗ್ರಾಮದ ಸರ್ವೆ ನಂ.86ರಲ್ಲಿ 79 ಎಕರೆ ಏಳು ಗುಂಟೆ ಜಮೀನನ್ನು ಕೆಐಎಡಿಬಿಯು ನೈಸ್ ಸಂಸ್ಥೆಗೆ 2000ರಲ್ಲಿ ಪೊಸಿಷನ್ ಸರ್ಟಿಫಿಕೇಟ್ ನೀಡಿ ಹಸ್ತಾಂತರಿಸಿತ್ತು. ಕೆ.ವಿ.ಚಂದ್ರನ್ ಹಾಗೂ ಇತರರು ಸೇರಿಕೊಂಡು ಆಧಾರ್ ಕಾರ್ಡ್ನಲ್ಲಿ ತಮ್ಮ ಜನ್ಮ ದಿನಾಂಕವನ್ನು 1934ರ ಜೂನ್ 7 ಎಂಬುದಾಗಿ ನಕಲಿ ದಾಖಲೆ ಸೃಷ್ಟಿಸಿಕೊಂಡಿದ್ದರು. ಎಂ.ಪಿ. ದೇವರಾಜು ಅವರ ಜತೆಗೆ ಸೇರಿಕೊಂಡು 2023ರ ಜುಲೈ 12ರಂದು ಜಿಪಿಎ ಹಾಗೂ ಕರಾರು ಒಪ್ಪಂದ ತಯಾರು ಮಾಡಿಕೊಂಡಿದ್ದರು. ಆ ಕರಾರು ಹಾಗೂ ಜಿಪಿಎನಲ್ಲಿ ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿ, ಕೊಡಿಗೇಹಳ್ಳಿ ಗ್ರಾಮದ ಸರ್ವೆ ನಂಬರ್ 86 ಹಾಗೂ ಹೊಸ ಸರ್ವೆ ನಂಬರ್ 144ರಲ್ಲಿ ನಾಲ್ಕು ಎಕರೆ ಜಮೀನು ತಮಗೆ ಸೇರಿರುವಂತೆ ಕರಾರಿನಲ್ಲಿ ನಮೂದು ಮಾಡಿಕೊಂಡಿರುತ್ತಾರೆ. ಆದರೆ, ಕೆ.ವಿ.ಚಂದ್ರನ್ ಅವರು ಕರ್ನಾಟಕ ಬ್ಯಾಂಕ್, ಹೇರೋಹಳ್ಳಿ ಶಾಖೆಯಲ್ಲಿ ಖಾತೆ ತೆರೆಯುವಾಗ ಸಲ್ಲಿಸಿದ್ದ ಅಧಿಕೃತ ದಾಖಲೆಗಳಾದ ಆಧಾರ್ ಕಾರ್ಡ್ ಹಾಗೂ ಪಾನ್ಕಾರ್ಡ್ ದಾಖಲೆಗಳಲ್ಲಿ ಚಂದ್ರನ್ ಅವರ ಜನ್ಮ ದಿನಾಂಕ 1957ರ ಜೂನ್ 7 ಎಂದು ನಮೂದಾಗಿರುತ್ತದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನೀಡಿದ ದೂರು ಆಧರಿಸಿ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
‘ಸೆ.11ರಂದು ದೂರು ಬಂದಿತ್ತು. ಪ್ರಾಥಮಿಕ ವಿಚಾರಣೆ ವೇಳೆ ಚಂದ್ರನ್ ಅವರು ಸಂಜ್ಞೆ ಅಪರಾಧದಲ್ಲಿ ಭಾಗಿ ಆಗಿರುವುದು ಕಂಡುಬಂದಿದೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.