ADVERTISEMENT

ಠಾಣೆ ಮೆಟ್ಟಿಲೇರಿದ ವಾರಗಿತ್ತಿಯರ ಕಲಹ: ನಟಿ ಕಾವ್ಯಾಗೌಡ ಸೇರಿದಂತೆ 7ಜನರ ಮೇಲೆ FIR

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 23:30 IST
Last Updated 27 ಜನವರಿ 2026, 23:30 IST
ಗಲಾಟೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ ಪ್ರೇಮಾ ದಂಪತಿ  
ಗಲಾಟೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ ಪ್ರೇಮಾ ದಂಪತಿ     

ಬೆಂಗಳೂರು: ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟಿ ಕಾವ್ಯಾಗೌಡ ಹಾಗೂ ಪ್ರೇಮಾ (ಒಂದೇ ಮನೆಯ ಸೊಸೆಯಂದಿರು) ಅವರು ಪರಸ್ಪರ ದೂರು – ಪ್ರತಿದೂರು ನೀಡಿದ್ದು, ಒಟ್ಟು ಏಳು ಮಂದಿ ವಿರುದ್ಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್‌ಗಳು ಸೋಮವಾರ ರಾತ್ರಿ ಹಾಗೂ ಮಂಗಳವಾರ ಬೆಳಿಗ್ಗೆ ದಾಖಲಾಗಿವೆ.

ಸೋಮಶೇಖರ್ ಮತ್ತು ಅವರ ಅಣ್ಣ ನಂದೀಶ್‍ಕುಮಾರ್, ಕಲ್ಕೆರೆ ಬಳಿಯ ಎನ್‍ಆರ್‌ಐ ಲೇಔಟ್‍ನ ಮನೆಯಲ್ಲಿ ತಂದೆಯ ಜತೆಗೆ ಒಟ್ಟಿಗೆ ವಾಸವಾಗಿದ್ದಾರೆ. ಕಾವ್ಯಾಗೌಡ–ಸೋಮಶೇಖರ್ ದಂಪತಿ ಹಾಗೂ ಪ್ರೇಮಾ – ನಂದೀಶ್‌ಕುಮಾರ್ ದಂಪತಿ ನಡುವೆ ಗಲಾಟೆ ನಡೆದಿದ್ದು, ರಾಮಮೂರ್ತಿನಗರ ಠಾಣೆಯ ಮೆಟ್ಟಿಲೇರಿದೆ. ಪ್ರೇಮಾ ಮೊದಲು ದೂರು ನೀಡಿದ್ದರೆ, ಕಾವ್ಯಾ ಬಳಿಕ ದೂರು ನೀಡಿದ್ದಾರೆ.  

ಇಬ್ಬರೂ ಪ್ರತ್ಯೇಕ ದೂರು ನೀಡಿದ್ದಾರೆ. ದೂರು ಆಧರಿಸಿ, ನಿಂದನೆ, ಕೊಲೆ ಬೆದರಿಕೆ, ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ಆರೋಪದಡಿ ಪ್ರೇಮಾ, ನಂದೀಶ್ ಕುಮಾರ್ ಹಾಗೂ ಪ್ರೇಮಾ ಅವರ ತಂದೆ ರವಿಕುಮಾರ್, ಸಹೋದರಿ ಕಸ್ತೂರಿ ಪ್ರಿಯಾ ಹಾಗೂ ಸೋಮಶೇಖರ್, ಕಾವ್ಯಾಗೌಡ ಹಾಗೂ ಕಾವ್ಯಾ ಸಹೋದರಿ ಭವ್ಯಗೌಡ ಅವರ ವಿರುದ್ಧ ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿದೆ. ಸದ್ಯ ಐವರ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಗಲಾಟೆಯ ವಿಡಿಯೊಗಳನ್ನು ಪಡೆದುಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

ನಟಿ ಕಾವ್ಯಾ ದೂರಿನಲ್ಲಿ ಏನಿದೆ?: ‘ಎನ್‌ಆರ್‌ಐ ಲೇಔಟ್‌ನ ಒಂದನೇ ಮುಖ್ಯರಸ್ತೆಯ ಒಂದನೇ ಕ್ರಾಸ್‌ನಲ್ಲಿರುವ ಮನೆಯಲ್ಲಿ ಪತಿ ಸೋಮಶೇಖರ್‌ ಹಾಗೂ ಎರಡು ವರ್ಷದ ಮಗು ಜತೆಗೆ ವಾಸ ಮಾಡುತ್ತಿದ್ದೇನೆ. ಮಗು ನೋಡಿಕೊಳ್ಳಲು ಸುಮಾ ಅವರನ್ನು ನೇಮಿಸಿಕೊಂಡಿದ್ದೇವೆ. ಕೆಲವು ದಿನಗಳ ಹಿಂದೆ ಫೋಟೊಶೂಟ್ ಮಾಡಲು ಹಾಲ್‌ನಲ್ಲಿ ಎಲ್ಲ ಕೆಲಸಗಾರರು ಓಡಾಟ ನಡೆಸುತ್ತಿದ್ದರು. ಸುಮಾ ಅವರನ್ನು ಕಳ್ಳಿ ಎಂದು ಪ್ರೇಮಾ–ನಂದೀಶ್‌ ದಂಪತಿ ನಿಂದಿಸಿದ್ದರು. ಅಲ್ಲದೇ ಜ.26ರಂದು ಮಗುವಿನ ಕೆನ್ನೆಗೆ ಪ್ರೇಮಾ ಹೊಡೆದಿದ್ದರು’ ಎಂದು ಕಾವ್ಯಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಮಗುವಿಗೆ ಹೊಡೆದಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ‘ಇದು ನನ್ನ ಮನೆ. ನನ್ನ ಏರಿಯಾ’ ಎಂದು ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದರು. ಅಡುಗೆ ಕೋಣೆಯಲ್ಲಿದ್ದ ರವಿಕುಮಾರ್ ಅವರು ಪತಿ ಸೋಮಶೇಖರ್‌ಗೂ ದೊಣ್ಣೆಯಿಂದ ಹೊಡೆದಿದ್ದಾರೆ. ನನ್ನ ಕುತ್ತಿಗೆಗೂ ಕೈಹಾಕಿ, ನೂರಾರು ಜನರ ಮುಂದೆ ಅತ್ಯಾಚಾರ ಮಾಡಿ ಸಾಯಿಸ್ತೀನಿ ಎಂದು ಕಾಲಿನಿಂದ ಒದ್ದಿದ್ದಾರೆ’ ಎಂದು ದೂರಿನ ಪ್ರತಿಯಲ್ಲಿ ನಟಿ ಉಲ್ಲೇಖಿಸಿದ್ದಾರೆ.

ಕೊಲೆಗೆ ಯತ್ನ?: ಸೋಮಶೇಖರ್‌ಗೆ ರವಿಕುಮಾರ್‌ ಅವರು ಚಾಕುವಿನಿಂದ ಬಲಭುಜಕ್ಕೆ ತಿವಿದು ಕೊಲೆಗೆ ಯತ್ನಿಸಿದ್ದಾರೆ. ಬಳಿಕ ಕಾರು ಚಾಲಕನ ಸಹಾಯ ಪಡೆದು ಆಸ್ಪತ್ರೆಗೆ ದಾಖಲಾಗಿದ್ದೆವು ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಜೀವ ಬೆದರಿಕೆ ಹಾಕಿ ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ಮಾಡಿರುವ ರವಿಕುಮಾರ್‌, ಪ್ರೇಮಾ, ನಂದೀಶ್‌, ಪ್ರಿಯಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆಯೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.

ಕಾವ್ಯಾ ದಂಪತಿ 

ಮಾಂಗಲ್ಯ ಸರ ಕಸಿದು ಹಲ್ಲೆ

‘ಎನ್‌ಆರ್‌ಐ ಲೇಔಟ್‌ನಲ್ಲಿ ನಾವಿರುವ ಮನೆಯಲ್ಲೇ ಸೋಮಶೇಖರ್ ಹಾಗೂ ಕಾವ್ಯಾಗೌಡ ಅವರು ವಾಸವಿದ್ದಾರೆ. ನಂದೀಶ್ ಅವರು ಊಟ ಮಾಡುತ್ತಿರುವಾಗ ಕಾವ್ಯಾ ಹಾಗೂ ಸೋಮಶೇಖರ್‌ ಬಂದು ‘ಇದು ನಮ್ಮ ಮನೆ; ನೀವು ಆಚೆಗೆ ಹೋಗಿ’ ಎಂದು ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದರು. ಬಳಿಕ ನಮ್ಮ ತಂದೆಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದರು. ಮಾವನ ಗೆಸ್ಟ್‌ಹೌಸ್‌ಗೆ ಹೋಗಿದ್ದಾಗ ನನ್ನ ತಂಗಿ ಕಸ್ತೂರಿ ಪ್ರಿಯಾ ಮೇಲೂ ಕಾವ್ಯಾ ಹಲ್ಲೆ ಮಾಡಿದ್ದಾರೆ’ ಎಂದು ಪ್ರೇಮಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ‘ಕಾವ್ಯಾ ಅವರ ಸಹೋದರಿ ಭವ್ಯಾಗೌಡ ಅವರು ಚಪ್ಪಲಿಯಿಂದ ಹೊಡೆದು ನಿಂದಿಸಿ ಮಾಂಗಲ್ಯದ ಸರವನ್ನು ಕಸಿದುಕೊಂಡು ತುಂಡು ಮಾಡಿದ್ದಾರೆ’ ಎಂದು ದೂರುದಾರೆ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.