ಪೀಣ್ಯ ದಾಸರಹಳ್ಳಿ: ಪೆರಿಫೆರಲ್ ವರ್ತುಲ ರಸ್ತೆ–ಪಿಆರ್ಆರ್1 (ಬೆಂಗಳೂರು ಬ್ಯುಸಿನೆಸ್ ಕಾರಿಡಾರ್) ಯೋಜನೆಗೆ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿರುವ ಜಮೀನುಗಳಿಗೆ ದರ ನಿಗದಿ ಸಂಬಂಧ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳು (ಬಿಡಿಎ) ಸೋಮವಾರ ಆಯೋಜಿಸಿದ್ದ ಸಂಧಾನ ಸೂತ್ರದ ಸಭೆಗೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.
ವರ್ತೂರು, ಬ್ಯಾಲಕೆರೆ, ಆವಲಹಳ್ಳಿ, ಚೀಮಸಂದ್ರ, ಬಿದರೇನ ಅಗ್ರಹಾರ, ಕಾಡುಗೋಡಿ, ಸೀಗೆಹಳ್ಳಿ, ಕಸಘಟ್ಟಪುರ, ಚಿಕ್ಕಬಾಣಾವರ, ಚೊಕ್ಕನಹಳ್ಳಿ, ನಗರೇಶ್ವರ ನಾಗೇನಹಳ್ಳಿ ದೊಡ್ಡಗುಬ್ಬಿಯಲ್ಲಿ ದರ ನಿಗದಿ ಪಡಿಸಲು ಜಮೀನಿನ ರೈತರೊಂದಿಗೆ ಸಂಧಾನ ಸೂತ್ರದ ಸಭೆಯನ್ನು ಆಯೋಜಿಸಿತ್ತು.
ಸಭೆ ಆಯೋಜಿಸಿದ್ದ ಚಿಕ್ಕಬಾಣಾವರ ಪುರಸಭೆ ಬಳಿ ರೈತ ಹೋರಾಟಗಾರ ಬಿ.ಎಂ.ಚಿಕ್ಕಣ್ಣ ನೇತೃತ್ವದಲ್ಲಿ ಜಮಾಯಿಸಿದ ರೈತರು, ‘ಸಭೆ ಆಯೋಜನೆ ಕುರಿತು ನೋಟಿಸ್ ನೀಡಿಲ್ಲ. ಮಧ್ಯವರ್ತಿಗಳ ಮೂಲಕ ಸಭೆ ಆಯೋಜಿಸಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಭೆ ಆಯೋಜನೆಯನ್ನು ಸಮರ್ಥಿಸಿಕೊಳ್ಳಲು ಮುಂದಾದ ಅಧಿಕಾರಿಗಳನ್ನು ರೈತರು ತರಾಟೆಗೆ ತೆಗೆದುಕೊಂಡರು.
ರೈತರನ್ನು ಸಮಾಧಾನ ಪಡಿಸಲು ಯತ್ನಿಸಿದರೂ ಪ್ರಯೋಜನವಾಗಿಲಿಲ್ಲ. ಬಳಿಕ ಅಧಿಕಾರಿಗಳು ಸಭೆಯನ್ನು ಮುಂದೂಡಿ, ವಾಪಸ್ ತೆರಳಿದರು.
'ಪಿಆರ್ಆರ್–1 ಯೋಜನೆಗೆ ಜಮೀನು ನೀಡುವ ಭೂ ಮಾಲೀಕರಿಗೆ ಕೇಂದ್ರ ಸರ್ಕಾರದ 2013ರ ಭೂಸ್ವಾಧೀನ ಕಾಯ್ದೆ ಅಡಿ ಪರಿಹಾರ ನಿಗದಿ ನೀಡುವಂತೆ ಹಲವು ಬಾರಿ ಬಿಡಿಎಗೆ ಮನವಿ ಮಾಡಲಾಗಿದೆ. ಆದರೂ ಸಭೆ ನಡೆಸುವ ಮೂಲಕ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಯೋಜನೆಗೆ 2007ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಯಿತು. 18 ವರ್ಷ ಕಳೆದರೂ ಯೋಜನೆ ಅನುಷ್ಠಾನಗೊಂಡಿಲ್ಲ. ಭೂಪರಿಹಾರ ನಿಗದಿ ಮಾಡಲು ಸಾಧ್ಯವಾಗಿಲ್ಲ. ಇತ್ತ ಬೇಸಾಯ ಮಾಡಲು ಆಗುತ್ತಿಲ್ಲ. ಜಮೀನು ಮಾರಾಟ ಮಾಡಿ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಲು ಅವಕಾಶ ಇಲ್ಲದಂತಾಗಿದೆ’ ಎಂದು ರೈತರು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.