
ಎಫ್ಐಆರ್
ಬೆಂಗಳೂರು: ವಿದೇಶಿ ಪ್ರಜೆಗಳಿಗೆ ಮನೆಯನ್ನು ಬಾಡಿಗೆಗೆ ನೀಡಿರುವ ಕುರಿತು ಮಾಹಿತಿ ನೀಡದ ಮನೆ ಮಾಲೀಕರ ವಿರುದ್ಧ ಕೊತ್ತನೂರು ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಕೊತ್ತನೂರಿನ ಆರ್.ಕೆ. ಹೆಗಡೆ ನಗರದ ನಿವಾಸಿ ರಿಯಾಜ್ ಹುಸೇನ್ ಅವರ ವಿರುದ್ಧ ವಿದೇಶಿಗರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಸುಡಾನ್ ದೇಶದ ಇಬ್ಬರು ಪ್ರಜೆಗಳಿಗೆ ರಿಯಾಜ್ ಹುಸೇನ್ ಸುಮಾರು ಒಂದು ವರ್ಷದಿಂದ ಮನೆ ಬಾಡಿಗೆಗೆ ನೀಡಿದ್ದಾರೆ. ಆದರೆ, ವಿದೇಶಿ ಪ್ರಜೆಗಳ ಮಾಹಿತಿ ಒಳಗೊಂಡಿರುವ ಸಿ–ಫಾರಂ ಸಹ ನೀಡಿಲ್ಲ. ಜತೆಗೆ ಮೌಖಿಕವಾಗಿಯೂ ಮಾಹಿತಿ ನೀಡಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದರು.
‘ವಿದೇಶಿ ಪ್ರಜೆಗಳಿಗೆ ಮನೆ ಬಾಡಿಗೆಗೆ ನೀಡುವುದು, ಪಿ.ಜಿಯಲ್ಲಿ ಉಳಿಯಲು ಅವಕಾಶ ನೀಡುವ ಕುರಿತು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂಬ ನಿಯಮವಿದೆ. ಆದರೆ, ರಿಯಾಜ್ ಹುಸೇನ್ ಈ ಬಗ್ಗೆ ಸ್ಥಳೀಯ ಠಾಣೆಗೆ ಮಾಹಿತಿ ನೀಡಿಲ್ಲ. ಹೀಗಾಗಿ, ಅವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ’ ಎಂದು ಈಶಾನ್ಯ ವಿಭಾಗದ ಡಿಸಿಪಿ ವಿಥುನ್ ಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.