ಬೆಂಗಳೂರು: ವಿಮಾನ ನಿಲ್ದಾಣದಲ್ಲಿ ಕ್ಯಾಬ್ಗಾಗಿ ಕಾಯುತ್ತಿದ್ದ ಮುಂಬೈನ ಮಹಿಳೆಯನ್ನು ಪರಿಚಯಿಸಿಕೊಂಡು ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದ ಉದ್ಯಮಿ ಗಣೇಶ್ ನಾರಾಯಣ್ ವಿರುದ್ಧ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಸಂಬಂಧ ಸಂತ್ರಸ್ತೆ ರಾಜ್ಯ ಮಹಿಳಾ ಆಯೋಗಕ್ಕೆ ನೀಡಿದ್ದರು. ಆಯೋಗದ ಸೂಚನೆ ಮೇರೆಗೆ ಉದ್ಯಮಿ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
ಸಂತ್ರಸ್ತೆ 2022ರ ಆ.14ರಂದು ರಾತ್ರಿ 12 ಗಂಟೆಗೆ ಮುಂಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಕ್ಯಾಬ್ ಬುಕ್ ಮಾಡಿಕೊಂಡು ಮನೆಗೆ ಹೋಗಲು ನಿಲ್ದಾಣದ ಕ್ಯಾಬ್ ನಿಲ್ದಾಣದಲ್ಲಿ ಕಾಯುತ್ತಿದ್ದರು. ಆ ಸ್ಥಳಕ್ಕೆ ಬಂದ ಆರೋಪಿ ಸಂತ್ರಸ್ತೆಯನ್ನು ಪರಿಚಯಿಸಿಕೊಂಡಿದ್ದ. ಕೆಲ ಹೊತ್ತು ಇಬ್ಬರೂ ಮಾತುಕತೆ ನಡೆಸಿದ್ದರು. ಮೊಬೈಲ್ ನಂಬರ್ ಕೂಡ ಬದಲಾಯಿಸಿಕೊಂಡಿದ್ದರು. ಬಳಿಕ ಆಕೆ ಕ್ಯಾಬ್ನಲ್ಲಿ ಮನೆಗೆ ಹೋಗಿದ್ದರು ಎಂದು ಪೊಲೀಸರು ಹೇಳಿದರು.
ಮರು ದಿನ ಸಂತ್ರಸ್ತೆಗೆ ಕರೆ ಮಾಡಿದ್ದ ಉದ್ಯಮಿ ಭೇಟಿಯಾಗುವಂತೆ ಕೋರಿದ್ದಾನೆ. ಆಕೆ ನಿರಾಕರಿಸಿದ್ದರು. ಅದಾದ ಮೇಲೆ ಸಲುಗೆ ಬೆಳೆಸಿಕೊಂಡು ಪ್ರತಿನಿತ್ಯ ಕರೆ ಮಾಡುವುದು, ಚಾಟಿಂಗ್, ವಿಡಿಯೊ ಕಾಲ್ನಲ್ಲಿ ಮಾತನಾಡುತ್ತಿದ್ದರು. ಉದ್ಯಮಿಯ ವರ್ತನೆಯಲ್ಲಿ ಬದಲಾವಣೆಯಾದ ಪರಿಣಾಮ ಸಂತ್ರಸ್ತೆ ಸ್ನೇಹ ಕಡಿದುಕೊಳ್ಳಲು ಮುಂದಾಗಿದ್ದರು. ಆದರೂ ಆರೋಪಿ ಗಣೇಶ್, ತನ್ನ ಸಂಬಂಧ ಮುಂದುವರಿಸುವಂತೆ ಒತ್ತಡ ಹೇರುತ್ತಿದ್ದನೆಂದು ಸಂತ್ರಸ್ತೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.