ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಗೆ ಹಾಲಿನ ಪುಡಿ ಬದಲಿಗೆ ಸುವಾಸನೆ ಭರಿತ ಹಾಲು ನೀಡಲು ಬೆಂಗಳೂರು ಮಿಲ್ಕ್ ಯೂನಿಯನ್ ಲಿಮಿಟೆಡ್ (ಬಮುಲ್) ಮುಂದಾಗಿದೆ.
ಪ್ರಾಯೋಗಿಕವಾಗಿ ಬಮುಲ್ ವ್ಯಾಪ್ತಿಯ ಬೆಂಗಳೂರು ದಕ್ಷಿಣ (ರಾಮನಗರ), ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಶಾಲಾ ವಿದ್ಯಾರ್ಥಿಗಳಿಗೆ ವಿತರಿಸಲು ನಿರ್ಧರಿಸಿದೆ.
ವಿಕಾಸಸೌಧದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವ ಮಧುಬಂಗಾರಪ್ಪ ಮತ್ತು ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅವರು ಸಭೆ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಚರ್ಚೆ ನಡೆಸಿ, ಅಂತಿಮ ನಿರ್ಧಾರ ತೆಗೆದುಕೊಳ್ಳಲು ತೀರ್ಮಾನ ಮಾಡಲಾಗಿದೆ.
ಮೂರು ಜಿಲ್ಲೆಯ ಶಾಲಾಮಕ್ಕಳಿಗೆ ನಿತ್ಯ ಅಂದಾಜು 250 ಟನ್ ಹಾಲಿನ ಪುಡಿ ಪೂರೈಕೆ ಮಾಡಲಾಗುತ್ತಿದೆ. ಹಾಲಿನ ಪುಡಿಯನ್ನು ನೀರಿನಲ್ಲಿ ಬೆರೆಸಿ ಮಕ್ಕಳಿಗೆ ತಲಾ 200 ಗ್ರಾಂ ನೀಡಬೇಕಾಗಿದೆ. ಕೆಲವು ಕಡೆ ಶುದ್ಧ ನೀರು ಬಳಕೆ ಮಾಡದೆ ಇರುವುದು ಗೊತ್ತಾಗಿದೆ. ಅಲ್ಲದೆ, ಹಾಲಿನ ಪುಡಿಯನ್ನು ಹೋಟೆಲ್, ಅಂಗಡಿಗಳಿಗೆ ಮಾರಾಟ ಮಾಡುವ ದೂರುಗಳು ಬಂದಿವೆ.
ಹಾಗಾಗಿ ಹಾಲಿನ ಪುಡಿ ನೀಡುವ ಬದಲು ಸುವಾಸಿತ ಹಾಲು ನೀಡುವುದರಿಂದ ಮಕ್ಕಳು ಸೇವೆನೆ ಮಾಡಲು ಅನುಕೂಲವಾಗಲಿದೆ. ಪರಿಶುದ್ಧವಾದ ಹಾಲನ್ನು ಬಾದಾಮ್, ಪಿಸ್ತಾ, ಮಾವು, ಕಿತ್ತಲೆ, ಫೈನಾಪಲ್, ಬಾಳೆಹಣ್ಣು ಸೇರಿ ಹತ್ತು ಬಗೆಯ ಸುವಾಸನೆಭರಿತ ಹಾಲು ಸಿದ್ದಪಡಿಸಬಹುದು ಎಂದು ಸಭೆಯಲ್ಲಿ ಚರ್ಚೆ ನಡೆದಿದೆ.
ಈಗಾಗಲೇ ‘ತೃಪ್ತಿ’ ಎಂಬ ಹೆಸರಿನಲ್ಲಿ 1 ಲೀಟರ್ ಪ್ಯಾಕ್ನಲ್ಲಿ ಸುವಾಸನೆ ಭರಿತ ಹಾಲನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಇದೇ ಹಾಲನ್ನು ಆಯಾ ಶಾಲಾ ಮಕ್ಕಳ ಸಂಖ್ಯೆಗೆ ಅನುಗುಣವಾಗಿ 5 ಅಥವಾ 10 ಲಿಟರ್ ಪ್ಯಾಕ್ ಅನ್ನು ಶಾಲೆಗೆ ಪೂರೈಸಿದರೆ ಸುಲಭವಾಗಿ ಹಂಚಿಕೆ ಮಾಡಬಹುದಾಗಿದೆ ಎಂದು ಸಭೆಯಲ್ಲಿ ಚರ್ಚಿಸಲಾಗಿದೆ.
‘ಶಾಲಾ ಮಕ್ಕಳಿಗೆ ಹಾಲಿನ ಪುಡಿ ಪೂರೈಕೆ ಹೆಚ್ಚಿನ ವೆಚ್ಚವಾಗುತ್ತಿದೆ. ಆದ್ದರಿಂದ ಸುವಾಸನೆ ಭರಿತ ಹಾಲು ನೀಡಲು ನಿರ್ಧರಿಸಿದ್ದು, ಈ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.