ಬಾಳೆ ಎಲೆ ಹಾಗೂ ತೆಂಗಿನ ಗರಿಗಳನ್ನು ಬಳಸಿ ಮಾಡಿರುವ ಅಮೃತಸರದ ವಾಲ್ಮೀಕಿ ಆಶ್ರಮದ ಕಲಾಕೃತಿಯನ್ನು ಮಹಿಳೆಯರು ಕುತೂಹಲದಿಂದ ವಿಕ್ಷೀಸಿದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ಬಾಳೆ ಎಲೆ ಹಾಗೂ ತೆಂಗಿನ ಗರಿಗಳಲ್ಲಿ ಅರಳಿದ ಅಮೃತಸರದ ವಾಲ್ಮೀಕಿ ಆಶ್ರಮ, ರಾಮ–ಸೀತೆ ಹಾಗೂ ಲಕ್ಷ್ಮಣರ ಕಲಾಕೃತಿಗಳು ನೋಡುಗರ ಗಮನ ಸೆಳೆದವು.
ಲಾಲ್ಬಾಗ್ನ ತೋಟಗಾರಿಕೆ ಮಾಹಿತಿ ಕೇಂದ್ರದಲ್ಲಿ ಫಲಪುಷ್ಪ ಪ್ರದರ್ಶನದ ಅಂಗವಾಗಿ ಆಯೋಜಿಸಿರುವ ವಿಶೇಷ ಪ್ರದರ್ಶನದಲ್ಲಿ ಕಂಡು ಬಂದ ದೃಶ್ಯಗಳಿವು.
ಜಾನೂರ್ ಕಲೆಯ ಮೂಲಕ ಕಪ್ಪು ಸುಂದರಿ ಪ್ರತಿಮೆಗೆ ಎಳೆ ತೆಂಗಿನ ಗರಿಗಳಿಂದ ತೊಡಿಸಿದ್ದ ಉಡುಗೆ ರೂಪದರ್ಶಿಯರನ್ನು ನಾಚಿಸುವಂತಿತ್ತು. ತರಕಾರಿಗಳಿಂದ ಮಾಡಿದ ವಿವಿಧ ಕಲಾಕೃತಿಗಳು ಕಣ್ಮನ ಸೆಳೆದವು. ಸೆಲ್ಫಿ ಬೂತ್ಗಳ ಮುಂದೆ ಚಿಣ್ಣರು ಮತ್ತು ಮಹಿಳೆಯರು ನಿಂತು ಫೋಟೊ ತೆಗೆಸಿಕೊಳ್ಳುತ್ತಿದ್ದರು. ಇತರೆ ಕಲೆಗಳು ನೋಡುಗರ ಮನಸೂರೆಗೊಂಡವು. ಇಕೆಬಾನ ಹೂಗಳ ಪ್ರದರ್ಶನ ಚಿತ್ತಾಕರ್ಷಕವಾಗಿತ್ತು. ಈ ಪ್ರದರ್ಶನಕ್ಕೆ ಚಿತ್ರನಟಿ ಪ್ರೇಮಾ ಅವರು ಶನಿವಾರ ಚಾಲನೆ ನೀಡಿದರು.
ಗಣರಾಜ್ಯೋತ್ಸವದ ಅಂಗವಾಗಿ ಲಾಲ್ಬಾಗ್ನ ಗಾಜಿನ ಮನೆಯಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ವಿಷಯ ಆಧಾರಿತ ಫಲ–ಪುಷ್ಪ ಪ್ರದರ್ಶನ ವೀಕ್ಷಿಸಲು ಶನಿವಾರ ಸಾವಿರಾರೂ ಜನ ಬಂದಿದ್ದರು.
ಶಾಲಾ–ಕಾಲೇಜು, ಕಚೇರಿಗಳಿಗೆ ರಜೆ ಇದ್ದಿದ್ದರಿಂದ ಬೆಳಿಗ್ಗೆಯಿಂದಲೇ ಸಾರ್ವಜನಿಕರು ಲಾಲ್ಬಾಗ್ಗೆ ಆಗಮಿಸಿದ್ದರು. ಜನ ಹೆಚ್ಚಿದ್ದರಿಂದ ಉದ್ಯಾನದ ನಾಲ್ಕು ದ್ವಾರಗಳಲ್ಲಿ ಟಿಕೆಟ್ ಕೌಂಟರ್ಗಳನ್ನು ಹೆಚ್ಚಿಸಲಾಗಿತ್ತು. ನರ್ಸರಿಗಳ ಬಳಿ ಸಸಿಗಳನ್ನು ಖರೀದಿಸುವಲ್ಲಿ, ಮಾರಾಟ ಮಳಿಗೆಗಳ ಬಳಿ ಜನಸಂದಣಿ ಹೆಚ್ಚಾಗಿತ್ತು.
‘ವಾರಾಂತ್ಯದಲ್ಲಿ ಫಲಪುಷ್ಪ ಪ್ರದರ್ಶನ ವೀಕ್ಷಿಸಲು 37,841 ಜನ ಭೇಟಿ ನೀಡಿದ್ದರು. ಒಟ್ಟು ₹ 21.44 ಲಕ್ಷ ಹಣ ಸಂಗ್ರಹವಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.