ADVERTISEMENT

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ; 2 ಬಾರಿ ರನ್‌ವೇ ಬಂದ್‌

ನಸುಕಿನಲ್ಲಿ ದಟ್ಟ ಮಂಜು

​ಪ್ರಜಾವಾಣಿ ವಾರ್ತೆ
Published 17 ಜನವರಿ 2019, 19:25 IST
Last Updated 17 ಜನವರಿ 2019, 19:25 IST
   

ಬೆಂಗಳೂರು: ನಸುಕಿನಲ್ಲಿ ದಟ್ಟ ಮಂಜು ಕಾಣಿಸಿಕೊಂಡಿದ್ದರಿಂದಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಗುರುವಾರ ಒಂದೇ ದಿನ ಎರಡು ಬಾರಿ ರನ್‌ವೇ ಬಂದ್‌ ಮಾಡಲಾಯಿತು.

ಬೆಳಿಗ್ಗೆ 5.45 ಗಂಟೆಯಿಂದ 5.56 ಹಾಗೂ ಬೆಳಿಗ್ಗೆ 6.47ರಿಂದ 7.30ರವರೆಗೆ ರನ್‌ವೇಯಲ್ಲಿ ವಿಮಾನಗಳ ಕಾರ್ಯಾಚರಣೆ ಇರಲಿಲ್ಲ. ಅದರಿಂದಾಗಿ 62 ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಯಿತು.

ನಸುಕಿನ 4.22 ಗಂಟೆಯಿಂದ ಬೆಳಿಗ್ಗೆ 8.47ರವರೆಗೆ ನಿಲ್ದಾಣ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಮಂಜು ಕವಿದ ವಾತಾವರಣವಿತ್ತು. ವಿಮಾನಗಳ ಪೈಲಟ್‌ಗಳಿಗೆ ರನ್‌ವೇ ಸ್ಪಷ್ಟವಾಗಿ ಗೋಚರಿಸುತ್ತಿರಲಿಲ್ಲ. ಅದೇ ಕಾರಣಕ್ಕೆ ವಿಮಾನಗಳ ಲ್ಯಾಂಡಿಂಗ್ ಹಾಗೂ ಟೇಕಾಫ್ ತಡವಾಯಿತು.

ADVERTISEMENT

ನಿಲ್ದಾಣದಿಂದ ಹೊರಡಬೇಕಿದ್ದ 44 ವಿಮಾನಗಳು ತಡವಾಗಿ ಹಾರಾಟ ನಡೆಸಿದವು. ನಿಲ್ದಾಣದಲ್ಲಿ ಇಳಿಯಬೇಕಿದ್ದ 18 ವಿಮಾನಗಳು ತಡವಾಗಿ ಭೂಸ್ಪರ್ಶ ಮಾಡಿದವು.ಕೆಐಎನಲ್ಲಿ ಇಳಿಯಬೇಕಿದ್ದ ಒಂದು ವಿಮಾನವನ್ನು ಮಾರ್ಗ ಬದಲಾವಣೆ ಮಾಡಿ ಹೈದರಾಬಾದ್‌ಗೆ ಕಳುಹಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.