ಬೆಂಗಳೂರು: ‘ಊರಲ್ಲಿ ಏನೂ ಇಲ್ಲ. ಜೀವನ ನಡೆಸುವುದೂ ಕಷ್ಟವಾಗಿತ್ತು. ಹೊಟ್ಟೆಪಾಡಿಗಾಗಿ ಇಲ್ಲಿಗೆ ಬಂದಿದ್ದೇವೆ. ಈ ಪಾದಚಾರಿ ಮಾರ್ಗವೇ ನಮಗೆ ಮನೆಯಂತಾಗಿದೆ’.
ಇದು, ಕೆಂಪೇಗೌಡ ಬಸ್ ನಿಲ್ದಾಣದ ಪಾದಚಾರಿ ಮಾರ್ಗದಲ್ಲೇ ಆಶ್ರಯ ಪಡೆದು ಜೀವನ ಸಾಗಿಸುತ್ತಿರುವಈರಮ್ಮ ಅವರ ಮಾತು.
ನಿರ್ಗತಿಕರನ್ನು ಗುರುತಿಸಲು ವಿಶೇಷ ಅಭಿಯಾನ ಹಮ್ಮಿಕೊಂಡಿರುವ ಬಿಬಿಎಂಪಿ ಹಾಗೂ ಸ್ವಯಂ ಸಂಸ್ಥೆಗಳ ಪ್ರತಿನಿಧಿಗಳು, ಶುಕ್ರವಾರ ರಾತ್ರಿ ನಗರದಲ್ಲೆಲ್ಲ ಸಂಚರಿಸಿದರು. ಪ್ರತಿನಿಧಿಗಳಿಗೆ ತಮ್ಮ ಕಷ್ಟ ಹೇಳಿಕೊಂಡ ಈರಮ್ಮ, ‘ನಿತ್ಯವೂ ರಸ್ತೆಬದಿಯಲ್ಲೇ ತಿಂಡಿ, ಊಟ ಮಾಡಿ ಬದುಕುತ್ತಿದ್ದೇವೆ. ನಮ್ಮವರು ಅಂತಾ ಯಾರೂ ಇಲ್ಲ. ಮಳೆಗಾಲ ಹಾಗೂ ಚಳಿಗಾಲದಲ್ಲಂತೂ ನಮ್ಮ ಕಷ್ಟ ಹೇಳತೀರದು’ ಎಂದು ಕಣ್ಣೀರಿಟ್ಟರು.
ನಿರ್ಗತಿಕರಾದ ಪಲ್ಲವಿ, ಜಯಮ್ಮ, ಪಾರ್ವತಿ, ಸುರೇಶ್ ಹಾಗೂ ಸುನೀಲ್ ಸಹ ತಮ್ಮ ಅಳಲು ತೋಡಿಕೊಂಡರು.
‘ಸ್ಪರ್ಶ ಟ್ರಸ್ಟ್’ ಸಂಸ್ಥೆ ಸದಸ್ಯರು, ಚಿಕ್ಕಪೇಟೆಯ ತುಳಸಿ ಪಾರ್ಕ್ನ ಆರೋಗ್ಯ ವೈದ್ಯಾಧಿಕಾರಿ ಕಚೇರಿ ಪಕ್ಕದ ಪಾದಚಾರಿ ಮಾರ್ಗದಲ್ಲಿ ಮಲಗಿದ್ದ 100ಕ್ಕೂ ಹೆಚ್ಚು ನಿರಾಶ್ರಿತರಿಂದ ಮಾಹಿತಿ ಪಡೆದರು. ಆ ನಿರಾಶ್ರಿತರಿಗೆ ಹೊದಿಕೆಗಳನ್ನು ಕೊಟ್ಟು, ಆತಂಕ ಪಡ
ಬೇಡಿ. ನಿಮಗೆ ಎಲ್ಲ ಸೌಲಭ್ಯ ಒದಗಿಸಲಿದ್ದೇವೆ’ ಎಂದು ಧೈರ್ಯ ತುಂಬಿದರು.
ಅಹೋರಾತ್ರಿ ಸಮೀಕ್ಷೆ: ಮೆಜೆಸ್ಟಿಕ್ ಮೆಟ್ರೊ ನಿಲ್ದಾಣದ ಮುಂಭಾಗದಲ್ಲಿ ಬಿಬಿಎಂಪಿ ಉಪ ಆಯುಕ್ತ (ಕಲ್ಯಾಣ) ಜಗದೀಶ್, ಸಮೀಕ್ಷೆಗೆ ಚಾಲನೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.