ಬೆಂಗಳೂರು: ‘ಕೋವಿಡ್ ಕಾರಣದಿಂದ ಸಿಂಗೇನ ಅಗ್ರಹಾರಕ್ಕೆ ಸ್ಥಳಾಂತರಗೊಂಡಿದ್ದ ಸಗಟು ಮಾರುಕಟ್ಟೆಯನ್ನು ಕಲಾಸಿಪಾಳ್ಯಕ್ಕೆ ಮತ್ತೆ ಸ್ಥಳಾಂತರಿಸಬೇಕು’ ಎಂದುಕಲಾಸಿಪಾಳ್ಯ ತರಕಾರಿ ಮತ್ತು ಹಣ್ಣು ಸಗಟು ವರ್ತಕರ ಸಂಘ ಮನವಿ ಮಾಡಿದೆ.
ಈ ಸಂಬಂಧ ಸಂಘದ ನಿಯೋಗವು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.
‘ಕಳೆದ ವರ್ಷ ಏಪ್ರಿಲ್ನಲ್ಲಿ ಕೋವಿಡ್ ಎರಡನೇ ಅಲೆ ತೀವ್ರಗೊಂಡಿದ್ದರಿಂದ ನಗರದ ಕೇಂದ್ರ ವಾಣಿಜ್ಯ ಪ್ರದೇಶದಲ್ಲಿ ಹೆಚ್ಚು ಜನ ಒಂದೆಡೆ ಸೇರದಂತೆ ತಡೆಯುವ ಸಲುವಾಗಿ ಹಾಗೂ ಪರ್ಯಾಯ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಕಲಾಸಿಪಾಳ್ಯದ ಸಗಟು ಮಾರುಕಟ್ಟೆಯನ್ನು ಸಿಂಗೇನ ಅಗ್ರಹಾರದ ಬಳಿಗೆ ಸ್ಥಳಾಂತರಿಸಲಾಗಿತ್ತು. ಈಗ ಎಲ್ಲ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿರುವುದರಿಂದ ಮಾರುಕಟ್ಟೆಯನ್ನು ಮತ್ತೆ ಕಲಾಸಿಪಾಳ್ಯಕ್ಕೆ ಸ್ಥಳಾಂತರಿಸಬೇಕು’ ಎಂದು ಸಂಘದ ಅಧ್ಯಕ್ಷ ಆರ್.ವಿ.ಗೋಪಿ ಒತ್ತಾಯಿಸಿದ್ದಾರೆ.
‘ಆಗ ಅನಿವಾರ್ಯ ಕಾರಣದಿಂದ ಮಾರುಕಟ್ಟೆ ಸ್ಥಳಾಂತರಕ್ಕೆ ವರ್ತಕರು ಸಹಮತ ಸೂಚಿಸಿದ್ದರು. ನಗರದಿಂದ ಪ್ರತಿ ದಿನ 30 ಕಿ.ಮೀ ದೂರ ಸಂಚರಿಸಿದರೂ ನಿರೀಕ್ಷಿತ ವ್ಯಾಪಾರ ನಡೆಯುತ್ತಿಲ್ಲ.ಇದರಿಂದ ಕಲಾಸಿಪಾಳ್ಯ ಮಾರುಕಟ್ಟೆಯನ್ನೇ ಅವಲಂಬಿಸಿದ್ದ ಹಮಾಲಿಗಳು ಹಾಗೂ ದೂರದ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ’.
‘ವರ್ತಕರು ಮಾರುಕಟ್ಟೆಯಲ್ಲಿ ಕೋವಿಡ್ಗೆ ಸಂಬಂಧಿಸಿದ ಎಲ್ಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ವ್ಯಾಪಾರ ಮುಂದುವರಿಸಲಿದ್ದಾರೆ. ಈಗ ಎಲ್ಲವೂ ಸಹಜ ಸ್ಥಿತಿಯತ್ತ ಮರಳಿರುವುದರಿಂದ ಮಾರುಕಟ್ಟೆಯನ್ನು ಕಲಾಸಿಪಾಳ್ಯಕ್ಕೆ ಸ್ಥಳಾಂತರಿಸಲು ಅನುವು ಮಾಡಿಕೊಡಬೇಕು’ ಎಂದೂ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.