ADVERTISEMENT

ತರಕಾರಿ–ಹಣ್ಣುಗಳ ದರಗಳಲ್ಲಿ ಏರುಪೇರು

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 21:58 IST
Last Updated 8 ಜೂನ್ 2021, 21:58 IST
ಕಲಾಸಿಪಾಳ್ಯ ಮಾರುಕಟ್ಟೆ –ಸಾಂದರ್ಭಿಕ ಚಿತ್ರ
ಕಲಾಸಿಪಾಳ್ಯ ಮಾರುಕಟ್ಟೆ –ಸಾಂದರ್ಭಿಕ ಚಿತ್ರ   

ಬೆಂಗಳೂರು: ಇತ್ತೀಚೆಗೆ ಸುರಿದ ಪೂರ್ವ ಮುಂಗಾರು ಮಳೆಯ ಪರಿಣಾಮ ತರಕಾರಿ ಹಾಗೂ ಹಣ್ಣಿನ ದರಗಳು ತುಸು ಏರಿಕೆಯಾಗಿವೆ. ಕೆಲ ತರಕಾರಿಗಳು ದಿಢೀರ್‌ ದುಬಾರಿಯಾಗಿವೆ.

ವಾರದ ಹಿಂದೆ ಪ್ರತಿ ಕೆ.ಜಿ.ಗೆ ₹50ರಿಂದ ₹60ರವರೆಗಿದ್ದ ಬೀನ್ಸ್‌ ಬೆಲೆ ದಿಢೀರ್‌ ಏರಿಕೆ ಕಂಡಿದ್ದು ಸದ್ಯ ಕೆ.ಜಿ.ಗೆ ₹80ರಂತೆ ಮಾರಾಟವಾಗುತ್ತಿದೆ. ಬೆಳ್ಳುಳ್ಳಿ, ಬೆಂಡೆಕಾಯಿ, ಶುಂಠಿ,ಕ್ಯಾರೆಟ್ ದರ ಗಳೂ ಸ್ವಲ್ಪ ಏರಿಕೆಯಾಗಿವೆ.

ತರಕಾರಿಗಳ ಪೈಕಿಟೊಮೆಟೊ ದರ ಇನ್ನಷ್ಟು ಕುಸಿದಿದ್ದು, ಕೆ.ಜಿ.ಗೆ ಗರಿಷ್ಠ ₹10ರಂತೆ ಮಾರಾಟವಾಗುತ್ತಿದೆ.ಈರುಳ್ಳಿ, ಆಲೂಗಡ್ಡೆ,ಮೂಲಂಗಿ, ಬದನೆ, ಹೂಕೋಸು ಹಾಗೂ ಎಲೆ ಕೋಸು ಸೇರಿದಂತೆ ಇತರ ತರಕಾರಿ ದರಗಳು ಕಡಿಮೆ ಇವೆ.

ADVERTISEMENT

‘ತರಕಾರಿಗಳಿಗೆ ಲಾಕ್‌ಡೌನ್‌ ನಿಂದಾಗಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದು ಹಾಗೂ ವಾರದಿಂದ ಸುರಿದ ಭಾರಿ ಮಳೆಯ ಕಾರಣದಿಂದ ತರಕಾರಿ ದರಗಳು ಹೆಚ್ಚಾಗಿವೆ. ಸಾಮಾನ್ಯವಾಗಿ ಬೀನ್ಸ್‌ ದರ ಈ ಅವಧಿಯಲ್ಲಿ ಏರಿಕೆ ಕಾಣುತ್ತಿತ್ತು. ಮಳೆ ಯಿಂದ ಹಾನಿಗೆ ತುತ್ತಾಗಿದ್ದರಿಂದ ಬೀನ್ಸ್‌ ದರ ದಿಢೀರ್ ಏರಿದೆ’ ಎಂದು ತರಕಾರಿ ವ್ಯಾಪಾರಿ ಕುಮಾರ್ ವಿವರಿಸಿದರು.

‘ಟೊಮೆಟೊ ದರ ಒಂದು ತಿಂಗಳಿ ನಿಂದ ನೆಲಕಚ್ಚಿದೆ. ಹೊರ ರಾಜ್ಯಗಳಿಗೆ ಮೊದಲಿನಂತೆ ಟೊಮೆಟೊ ಸರಬರಾಜು ಆಗುತ್ತಿಲ್ಲ. ಇಲ್ಲಿನ ಮಾರುಕಟ್ಟೆಗಳೂ ಮುಚ್ಚಿವೆ. ಟನ್‌ಗಟ್ಟಲೆ ಟೊಮೆಟೊಗೆ ಈಗಿರುವ ಬೆಲೆ ಅದರ ಖರ್ಚನ್ನೂ ಸರಿದೂಗುವುದಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಟೊಮೊಟೊ ದರ ಏರುವ ಲಕ್ಷಣಗಳೇ ಇಲ್ಲ’ ಎಂದರು.

ಮಾವು ಖರೀದಿಗೆ ಆನ್‌ಲೈನ್‌ ಮೊರೆ:‘ಮಾರುಕಟ್ಟೆ ಇದ್ದಾಗ ಎಲ್ಲ ರೀತಿಯ ಮಾವು ಒಂದೇ ಸೂರಿನಲ್ಲಿ ಮಾರಾಟವಾಗುತ್ತಿತ್ತು. ಲಾಕ್‌ಡೌನ್ ಕಾರಣ ಮಾರುಕಟ್ಟೆಗಳನ್ನು ಮುಚ್ಚ ಲಾಗಿದೆ. ತಳ್ಳುವ ಗಾಡಿಗಳಲ್ಲಿ ಮಾವು ಖರೀದಿಸುವವರು ವಿರಳ. ಮನೆಯಲ್ಲೇ ಇರುವುದರಿಂದ ಬಹು ತೇಕರು ಆನ್‌ಲೈನ್ ಮೂಲಕವೇ ಮಾವು ತರಿಸಿ ಕೊಳ್ಳುತ್ತಿದ್ದಾರೆ. ಹಾಗಾಗಿ, ವ್ಯಾಪಾರ ಸರಿಯಾಗಿ ನಡೆ ಯುತ್ತಿಲ್ಲ’ ಎನ್ನುತ್ತಾರೆ ಮಾವು ವ್ಯಾಪಾರಿ ಹನುಮೇಶ್.

ಈ ಹಿಂದೆ ಎಲ್ಲ ಸೊಪ್ಪಿನ ದರ ಪ್ರತಿ ಕಟ್ಟಿಗೆ ₹10ರ ಒಳಗಿತ್ತು. ಈಗ ಸೊಪ್ಪಿನ ದರಗಳು ಸ್ವಲ್ಪ ಏರಿಕೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.