ಬೆಂಗಳೂರು: ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಎದುರು ಮಾಜಿ ಮೇಯರ್ ಡಾ.ಜಿ.ನಾರಾಯಣ ಅವರ ಪ್ರತಿಮೆ ಸ್ಥಾಪಿಸ ಬೇಕು’ ಎಂದು ಜಾನಪದ ಲೋಕದ ಮಾಜಿ ಅಧ್ಯಕ್ಷ ಡಾ.ಟಿ.ತಿಮ್ಮೇಗೌಡ ಆಗ್ರಹಿಸಿದರು.
ನಗರದಲ್ಲಿ ಭಾನುವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಅಖಿಲ ಕರ್ನಾಟಕ ಕಥೋಲಿಕ್ ಕ್ರೈಸ್ತರ ಕನ್ನಡ ಸಂಘ ಆಯೋಜಿಸಿದ್ದ ಡಾ.ಜಿ.ನಾರಾಯಣ ಅವರ ಜನ್ಮ ಶತಮಾನೋತ್ಸವದಲ್ಲಿ ಅವರು ಮಾತನಾಡಿದರು.
‘ಸ್ವಾತಂತ್ರ್ಯ ಹೋರಾಟದಲ್ಲಿ ನಾರಾಯಣರು ಜೈಲು ಸೇರಿದ್ದರು. ದೇಶದ ಅಭಿವೃದ್ಧಿಗೆ ಶ್ರಮಿಸಿದ್ದರು. ನಿಷ್ಠೆ, ಪ್ರಾಮಾಣಿಕತೆಯಿಂದ ಬದುಕಿದ್ದ ಅವರು ಕೊನೆಯವರೆಗೂ ಯಾವುದೇ ಮಾಸಾಶನ ಪಡೆದುಕೊಳ್ಳಲಿಲ್ಲ’ ಎಂದರು.
‘ಇದುವರೆಗೆ ಆಡಳಿತ ನಡೆಸಿ ರುವ ಸರ್ಕಾರಗಳು, ಅವರನ್ನು ಕಡೆಗಣಿಸಿವೆ. ಯಾವುದೇ ರಸ್ತೆ ಹಾಗೂ ಬಡಾವಣೆ ಗಳಿಗೂ ಅವರ ಹೆಸರಿಟ್ಟಿಲ್ಲ. ಇದು ನೋವಿನ ಸಂಗತಿ’ ಎಂದು ಹೇಳಿದರು.
‘ರಾಜಧಾನಿ ಜನರಿಗೆ ಮೊದಲು ಕಾವೇರಿ ನೀರು ಕಲ್ಪಿಸಿದ್ದರು. ಮೇಯರ್ ಆಗಿ ನಗರದ ಸಾಕಷ್ಟು ಬಡಾವಣೆ
ಗಳನ್ನು ಅಭಿವೃದ್ಧಿಗೊಳಿಸಿದ್ದರು. ಜತೆಗೆ, ಪಾಲಿಕೆಯ ಎದುರು ಕೆಂಪೇಗೌಡ ಅವರ ಪ್ರತಿಮೆಯನ್ನು ನಿರ್ಮಿಸಿದ್ದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ’ ಎಂದರು.
‘ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಕನ್ನಡ ಕಾರ್ಯಕರ್ತರ ಪಡೆ ಕಟ್ಟಿಕೊಂಡು ಕನ್ನಡ ಉಳಿಸಲು ಹೋರಾಟ ನಡೆಸಿದ್ದರು. ಹೊರ ರಾಜ್ಯಗಳಲ್ಲೂ ಸಾಹಿತ್ಯ ಸಮ್ಮೇಳನ ನಡೆಸಿ, ಕನ್ನಡ ಜಾಗೃತಿ ಮೂಡಿಸಿದ್ದರು. ರಾಮನಗರದ ಜಾನಪದ ಲೋಕದ ನಿರ್ಮಾಣಕ್ಕೆ ಸರ್ಕಾರದಿಂದ ₹ 1 ಕೋಟಿ ಅನುದಾನ ತರಲು ಶ್ರಮಿಸಿದ್ದರು. ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿ ಕನ್ನಡ ಅನುಷ್ಠಾನಕ್ಕೆ ಶ್ರಮಿಸಿ ಆಡಳಿತದಲ್ಲಿ ಕನ್ನಡ ಜಾರಿಗೆ ಶ್ರಮಿಸಿದ್ದರು’ ಎಂದು ಹೇಳಿದರು.
ಧರ್ಮಗುರು ಸೈಮನ್ ಬರ್ತ ಲೋಮಿಯಾ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯ ದರ್ಶಿ ಡಾ.ಸಂತೋಷ ಹಾನಗಲ್ಲು, ಅಖಿಲ ಕರ್ನಾಟಕ ಕ್ರೈಸ್ತರ ಕನ್ನಡ ಸಂಘದ ಅಧ್ಯಕ್ಷ ರಫಾಯಲ್ ರಾಜ್, ಕರ್ನಾಟಕ ವಿಕಾಸರಂಗದ ಅಧ್ಯಕ್ಷ ವ.ಚ.ಚನ್ನೇಗೌಡ, ಜಿ.ನಾರಾಯಣ ಪ್ರತಿಷ್ಠಾನದ ಅಧ್ಯಕ್ಷ ನಾ.ಗೋಪಾಲಕೃಷ್ಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.