ADVERTISEMENT

ಲಾಕ್‌ಡೌನ್‌ನಲ್ಲೂ ಗಾಂಜಾ; ಕಾರಿನ ಡಿಕ್ಕಿಯಲ್ಲಿ ಸಾಗಣೆ

ರಾಮಮೂರ್ತಿನಗರ ಪೊಲೀಸರಿಂದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 17 ಮೇ 2021, 15:59 IST
Last Updated 17 ಮೇ 2021, 15:59 IST
ಜಪ್ತಿ ಮಾಡಲಾದ ಗಾಂಜಾ ಜೊತೆ ಆರೋಪಿ
ಜಪ್ತಿ ಮಾಡಲಾದ ಗಾಂಜಾ ಜೊತೆ ಆರೋಪಿ   

ಬೆಂಗಳೂರು: ಲಾಕ್‌ಡೌನ್ ಜಾರಿಯಲ್ಲಿರುವಾಗಲೇ ಕಾರಿನಲ್ಲಿ ಗಾಂಜಾ ಬಚ್ಚಿಟ್ಟುಕೊಂಡು ಸಾಗಿಸುತ್ತಿದ್ದ ಆರೋಪಿ ಸುಬ್ಬರೆಡ್ಡಿ ಅಲಿಯಾಸ್ ಸುಬ್ಬು (42) ಎಂಬಾತನನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಸುಬ್ಬರೆಡ್ಡಿ, ಬೆಂಗಳೂರು ನಾಗಾವರದ ವೀರಣ್ಣನಪಾಳ್ಯದಲ್ಲಿ ವಾಸವಿದ್ದ. ಆತನಿಂದ ₹ 6 ಲಕ್ಷ ಮೌಲ್ಯದ ಗಾಂಜಾ ಹಾಗೂ ₹ 4 ಲಕ್ಷ ಮೌಲ್ಯದ ಕಾರು ಜಪ್ತಿ ಮಾಡಲಾಗಿದೆ’ ಎಂದು ಪೂರ್ವ ವಿಭಾಗದ ಡಿಸಿಪಿ ಎಸ್‌.ಡಿ. ಶರಣಪ್ಪ ತಿಳಿಸಿದರು.

‘ಕೊರೊನಾ ಸೋಂಕು ಹೆಚ್ಚುತ್ತಿರುವುದರಿಂದ ರಾಜ್ಯದಾದ್ಯಂತ ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ. ಅಗತ್ಯ ವಸ್ತುಗಳ ಸಾಗಣೆಗಾಗಿ ಗೂಡ್ಸ್ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿ, ಸರಕು ಹೆಸರಿನಲ್ಲಿ ಗಾಂಜಾ ಸಾಗಿಸುತ್ತಿದ್ದ. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಸುಬ್ಬರೆಡ್ಡಿಯನ್ನು ಸೆರೆಹಿಡಿಯಲಾಗಿದೆ’ ಎಂದೂ ಹೇಳಿದರು.

ADVERTISEMENT

ಆಂಧ್ರದಿಂದ ಬಂದು ಮಾರಾಟ: ‘ಆಂಧ್ರಪ್ರದೇಶದಲ್ಲಿ ಗಾಂಜಾ ಖರೀದಿಸುತ್ತಿದ್ದ ಆರೋಪಿ, ಅದನ್ನೇ ಬೆಂಗಳೂರಿಗೆ ತಂದು ಮಾರುತ್ತಿದ್ದ. ರಾಮಮೂರ್ತಿನಗರ, ಬಾಣಸವಾಡಿ, ಹೆಣ್ಣೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಈತನಿಗೆ ಗ್ರಾಹಕರಿದ್ದಾರೆ’ ಎದು ಶರಣಪ್ಪ ತಿಳಿಸಿದರು.

‘ಹೊಂಡಾ ಸಿಟಿ ಕಾರು ಇಟ್ಟುಕೊಂಡಿದ್ದ ಆರೋಪಿ, ಅದರ ಡಿಕ್ಕಿಯಲ್ಲಿ ಹೆಚ್ಚುವರಿ ಚಕ್ರ ಇರಿಸುವ ಜಾಗದಲ್ಲಿ ಗಾಂಜಾ ಬಚ್ಚಿಟ್ಟಿದ್ದ. ಆ ಕಾರಿನಲ್ಲಿ ನಗರದೆಲ್ಲೆಡೆ ಸುತ್ತಾಡಿ ಗಾಂಜಾ ಸರಬರಾಜು ಮಾಡುತ್ತಿದ್ದ. ಪ್ರತಿ ಕೆ.ಜಿ. ಗಾಂಜಾವನ್ನು ₹ 25 ಸಾವಿರಕ್ಕೆ ಮಾರುತ್ತಿದ್ದ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.