ರಾಜರಾಜೇಶ್ವರಿನಗರ: ಮೈಸೂರು ರಸ್ತೆಗೆ ಹೊಂದಿಕೊಂಡಂತಿರುವ ಅರಣ್ಯ ನೌಕರರ ಬಡಾವಣೆಯ ರಸ್ತೆ ಬದಿಯಲ್ಲಿರುವ ಮರಗಳ ಬುಡಗಳಿಗೆ ಕಸ ಹಾಕಿ, ಬೆಂಕಿ ಇಡಲಾಗುತ್ತದೆ. ಹತ್ತಾರು ಮರಗಳು ಇದರಿಂದ ನಾಶವಾಗುತ್ತಿವೆ.
ಮೈಸೂರು ರಸ್ತೆಯ ಜಯರಾಮ್ ದಾಸ್ ಕಾರ್ಖಾನೆ ಬಳಿಯ ರೈಲ್ವೆಗೇಟ್ ಮೂಲಕ ಬಡಾವಣೆಗೆ ಹೋಗುವ ಹಾದಿಯ ಎರಡೂ ಬದಿ ಮರಗಳ ಬುಡಕ್ಕೆ ಕಸ ಹಾಕಿ ಬೆಂಕಿ ಹಚ್ಚುತ್ತಿದ್ದಾರೆ. ಇದರಿಂದ ಮರಗಳು ಸುಟ್ಟುಹೋಗುತ್ತಿವೆ ಎಂದು ಸ್ಥಳೀಯರು ದೂರಿದರು.
‘ಮರಗಳು ಬೆಳೆಸಿ, ಪರಿಸರ ಉಳಿಸಿ, ಆರೋಗ್ಯವಂತ ಸಮಾಜ ನಿರ್ಮಾಣ ಮಾಡಿ ಎಂದು ಸರ್ಕಾರ, ಬಿಬಿಎಂಪಿ, ಅರಣ್ಯ ಇಲಾಖೆ ದೊಡ್ಡ ಮಟ್ಟದಲ್ಲಿ ಜಾಹಿರಾತು ನೀಡಿ ಪ್ರಚಾರ ಪಡೆಯುತ್ತವೆ. ಆದರೆ, ರಸ್ತೆಬದಿಯಲ್ಲಿ ಕಸ ಹಾಕಿ ಬೆಂಕಿ ಹಾಕುವವರ ಮೇಲೆ ಕ್ರಮ ಕೈಗೊಳ್ಳುವುದಿಲ್ಲ’ ಎಂದು ಆರೋಪಿಸಿದರು.
‘ರಾತ್ರೋರಾತ್ರಿ ಕಸ, ಒಣಗಿದ ಕಡ್ಡಿ, ಬಟ್ಟೆ, ಪ್ಲಾಸ್ಟಿಕ್ ತಂದು ಮರಗಳ ಬಳಿ ಸುರಿಯಲಾಗುತ್ತಿದೆ. ನಂತರ ಬೆಂಕಿ ಹಚ್ಚಿ ಹೋಗುತ್ತಾರೆ’ ಎಂದು ಶ್ಯಾಮಲ, ಜೆ.ರಮ್ಯಾ ಆರೋಪಿಸಿದರು. ‘ಬಿಡಿಎ ಬಡಾವಣೆಯಲ್ಲಿ ಬೆಳೆಸಿರುವ ಮರಗಳನ್ನು ಬೇರು ಸಹಿತ ಕಿತ್ತು ಹಾಕಿದರೂ ಕೇಳುವವರು ಇಲ್ಲದಂತಾಗಿದೆ’ ಎಂದು ಸತೀಶ್ ದೂರಿದರು.
ಬಿಬಿಎಂಪಿ ಅರಣ್ಯ ವಿಭಾಗದ ಜಗದೀಶ್ ಮಾತನಾಡಿ, ‘ರಸ್ತೆ ಬದಿ ಕಸ ಹಾಕಬಾರದು ಎಂದು ಹಲವು ಬಾರಿ ತಿಳಿಸಿದ್ದರೂ ಅದು ನಿಂತಿಲ್ಲ. ಕಸ ಸುರಿಯುವುದರಿಂದ ಕಿಡಿಗೇಡಿಗಳು ಬೆಂಕಿ ಹಾಕುತ್ತಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.