ADVERTISEMENT

ಪತ್ನಿಯೊಂದಿಗೆ ಪ್ರಯಾಣಿಸುವಾಗ ಬಂತು ಗೆಳತಿ ಕರೆ: ಕಾರು, ಪತ್ನಿ ಬಿಟ್ಟು ಪತಿ ಪರಾರಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2023, 4:20 IST
Last Updated 10 ಮಾರ್ಚ್ 2023, 4:20 IST
   

ಬೆಂಗಳೂರು: ಮಹದೇವಪುರ ಬಳಿ ವಾಹನಗಳ ದಟ್ಟಣೆಯಲ್ಲಿ ಸಿಲುಕಿದ್ದ ಕಾರಿನಲ್ಲಿ ಪತ್ನಿಯನ್ನು ಬಿಟ್ಟು ಪತಿ ಪರಾರಿಯಾಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

‘ಫೆ. 15ರಂದು ಮದುವೆಯಾಗಿದ್ದ ಯುವಕ–ಯುವತಿ, ಪ್ರಾರ್ಥನಾ ಮಂದಿರಕ್ಕೆ ಹೋಗಿ ವಾಪಸು ಮನೆಗೆ ತೆರಳುತ್ತಿದ್ದರು. ಇದೇ ಸಂದರ್ಭದಲ್ಲಿ ಕಾರಿನಲ್ಲಿ ಪತ್ನಿ ಬಿಟ್ಟು ಪತಿ ಪರಾರಿಯಾಗಿದ್ದಾರೆ. ಈ ಸಂಬಂಧ ಪತ್ನಿ ಹಾಗೂ ಅವರ ಮನೆಯವರು ಮಾರ್ಚ್ 5ರಂದು ದೂರು ನೀಡಿದ್ದಾರೆ. ಅದನ್ನು ಆಧರಿಸಿ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಗೋವಾದಲ್ಲಿ ಕೆಲ ವರ್ಷ ವಾಸವಿದ್ದ ಯುವಕ, ಅಲ್ಲಿಯೇ ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದರು. ಈ ಸಂಗತಿ ಅವರ ಮನೆಯವರಿಗೆ ಗೊತ್ತಿರಲಿಲ್ಲ. ಯುವಕನನ್ನು ಬೆಂಗಳೂರಿಗೆ ಕರೆಸಿದ್ದ ಕುಟುಂಬಸ್ಥರು, ಪರಿಚಯಸ್ಥ ಯುವತಿ ಜೊತೆ ಮದುವೆ ಮಾಡಿಸಿದ್ದರು.

ADVERTISEMENT

‘ಇದರ ನಡುವೆಯೇ ಗೋವಾದ ಯುವತಿ, ಯುವಕನ ಮೊಬೈಲ್‌ಗೆ ಕರೆ ಮಾಡಲಾರಂಭಿಸಿದ್ದರು. ಫೆ. 15ರಂದು ಕಾರಿನಲ್ಲಿ ಇರುವಾಗಲೇ ಯುವತಿ ಕರೆ ಬಂದಿತ್ತು. ಹಳೇ ಪ್ರೀತಿ ವಿಷಯದ ಬಗ್ಗೆ ಪತ್ನಿಗೂ ಅನುಮಾನ ಬಂದಿತ್ತು. ಈ ಬಗ್ಗೆ ಪತ್ನಿ, ಪ್ರಶ್ನಿಸಲಾರಂಭಿಸಿದ್ದ ಕಾರಣಕ್ಕೆ ಯುವಕ, ಕಾರಿನಿಂದ ಇಳಿದು ಸ್ಥಳದಿಂದ ಪರಾರಿಯಾ ಗಿದ್ದಾನೆ. ಪತ್ನಿ ಕೆಲ ದೂರ ಹಿಂಬಾಲಿಸಿದರೂ ಸುಳಿವು ಸಿಕ್ಕಿಲ್ಲ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.