ಥಾವರಚಂದ್ ಗೆಹಲೋತ್
ಬೆಂಗಳೂರು: ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ವಿಧಾನಮಂಡಲ ಅಧಿವೇಶನದಲ್ಲಿ ಓದದೇ ನಿರ್ಗಮಿಸುವ ಮೂಲಕ ಸಂವಿಧಾನವನ್ನು ಉಲ್ಲಂಘಿಸಿದ್ದಾರೆ. ಜನಪ್ರತಿನಿಧಿಗಳ ಸಭೆಗೆ ಅವಮಾನ ಮಾಡಿದ್ದಾರೆ ಎಂದು ‘ಜಾಗೃತ ನಾಗರಿಕರು’ ಆರೋಪಿಸಿದ್ದಾರೆ.
‘ಜಾಗೃತ ನಾಗರಿಕರು’ ಪರವಾಗಿ ಜಿ. ರಾಮಕೃಷ್ಣ, ಕೆ. ಮರುಳಸಿದ್ದಪ್ಪ, ಎಸ್.ಜಿ. ಸಿದ್ದರಾಮಯ್ಯ, ವಿಜಯಾ, ಟಿ.ಸುರೇಂದ್ರ ರಾವ್, ಬಿ. ಶ್ರೀಪಾದ ಭಟ್, ಕೆ.ಎಸ್. ವಿಮಲಾ, ಮಾವಳ್ಳಿ ಶಂಕರ್, ಜಾಣಗೆರೆ ವೆಂಕಟರಾಮಯ್ಯ, ಬಂಜಗೆರೆ ಜಯಪ್ರಕಾಶ್, ರುದ್ರಪ್ಪ ಹನಗವಾಡಿ, ಎನ್. ಗಾಯತ್ರಿ, ವಸುಂಧರಾ ಭೂಪತಿ ಈ ಕುರಿತು ಹೇಳಿಕೆ ನೀಡಿದ್ದಾರೆ.
ಈ ಅಸಹಕಾರ ನಡೆಯ ಮೂಲಕ ಹುದ್ದೆಯ ಘನತೆಗೆ ರಾಜ್ಯಪಾಲರು ಕುಂದು ತಂದಿದ್ದಾರೆ. ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸಿದ್ದಾರೆ. ನಿಯಮದಂತೆ ರಾಜ್ಯಪಾಲರ ಭಾಷಣದ ನಂತರ ನಡೆಯುವ ರಾಷ್ಟ್ರಗೀತೆಗೂ ಕಾಯದೇ ರಾಜ್ಯಪಾಲರು ಹೊರ ನಡೆದು ರಾಷ್ಟ್ರಗೀತೆಗೆ ಅಗೌರವ ಎಸಗಿದ್ದಾರೆ ಎಂದು ದೂರಿದ್ದಾರೆ.
ದೇಶಪ್ರೇಮದ ಬಗ್ಗೆ ಉಪದೇಶ ಮಾಡುವ ಬಿಜೆಪಿ ಶಾಸಕರು, ರಾಜ್ಯಪಾಲರ ಅಸಾಂವಿಧಾನಿಕ ನಡೆಗಳನ್ನು ಸಮರ್ಥನೆ ಮಾಡುತ್ತಿರುವುದು ರಾಜ್ಯಪಾಲರ ನಡೆಯ ಹಿಂದಿನ ದುರುದ್ದೇಶವನ್ನು ಸಮರ್ಥನೆ ಮಾಡುತ್ತದೆ ಎಂದು ಹೇಳಿದ್ದಾರೆ.
ಇದೇ ರೀತಿಯ ಘಟನೆಗಳು ಕೇರಳ ಮತ್ತು ತಮಿಳುನಾಡಿನಲ್ಲಿ ನಡೆದ ಬಗ್ಗೆ ವರದಿಯಾಗಿದ್ದು, ರಾಜ್ಯಪಾಲರ ಸಾಂವಿಧಾನಿಕ ಹುದ್ದೆಯನ್ನು ಬಿಜೆಪಿಯೇತರ ಸರ್ಕಾರಗಳ ವಿರುದ್ಧ ದುರುಪಯೋಗ ಪಡಿಸಿಕೊಳ್ಳುತ್ತಿರುವುದಕ್ಕೆ ಉದಾಹರಣೆ ಎಂದು ತಿಳಿಸಿದ್ದಾರೆ.
ವಿ.ಬಿ. ಗ್ರಾಮ್ ಜಿ ಯಂತಹ ಜನವಿರೋಧಿ ಕಾಯ್ದೆಯನ್ನು ವಾಪಸ್ ಮಾಡಲು ರಾಜ್ಯ ಸರ್ಕಾರ ನಿರ್ಣಯ ಅಂಗೀಕರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.