ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ ಅರ್ಬಾಜ್ (20) ಎಂಬಾತ ತನ್ನ ಸ್ನೇಹಿತನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದು, ಆತನನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಿದ್ದಿಕ್ (20) ಕೊಲೆಯಾದ ಯುವಕ.
‘ಸಿದ್ದಿಕ್ ಮತ್ತು ಅರ್ಬಾಜ್ ಆತ್ಮೀಯ ಗೆಳೆಯರು. ಒಂದೇ ಶಾಲೆಯಲ್ಲಿ ಓದಿದ್ದರು. ಡೇವಿಸ್ ರಸ್ತೆಯಲ್ಲಿ ವಾಸವಿದ್ದ ಅರ್ಬಾಜ್, ಪಾದಚಾರಿ ಮಾರ್ಗದ ಮೇಲೆ ಬಟ್ಟೆಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ. ಮಂಗಳವಾರ ರಾತ್ರಿ ಅರ್ಬಾಜ್ಗೆ ಕರೆ ಮಾಡಿದ್ದ ಸಿದ್ದಿಕ್, ಯಾವುದೋ ವಿಚಾರದ ಕುರಿತು ಮಾತನಾಡಬೇಕಿದೆ, ರಸಾದ್ ನಗರದ ರೋಲಿಂಗ್ ಮಿಲ್ ಬಳಿ ಬಾ ಎಂದು ತಿಳಿಸಿದ್ದ. ರಾತ್ರಿ 11.30ರ ಸುಮಾರಿಗೆ ಅರ್ಬಾಜ್ ಸ್ಥಳಕ್ಕೆ ಹೋಗಿದ್ದ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.
‘ಇಬ್ಬರ ನಡುವಣ ಜಗಳ ತಾರಕಕ್ಕೇರಿತ್ತು. ಈ ವೇಳೆ ಸಿಟ್ಟಿಗೆದ್ದಿದ್ದ ಸಿದ್ದಿಕ್, ತನ್ನ ಬಳಿ ಇದ್ದ ಚಾಕುವಿನಿಂದ ಅರ್ಬಾಜ್ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ. ಆತನ ಕೈಯಿಂದ ಚಾಕು ಕಿತ್ತುಕೊಂಡಿದ್ದ ಆರೋಪಿ ದೇಹದ ವಿವಿಧ ಭಾಗಗಳಿಗೆ ಇರಿದಿದ್ದ. ನೆಲಕ್ಕುರುಳಿದ್ದ ಸಿದ್ದಿಕ್ನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದ. ಬಳಿಕ ಅಲ್ಲಿಂದ ಪರಾರಿಯಾಗಿದ್ದ. ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
‘ಕೆಲ ವರ್ಷಗಳ ಹಿಂದೆ ಸಿದ್ದಿಕ್ ಮತ್ತು ಅರ್ಬಾಜ್ ನಡುವೆ ಯಾವುದೋ ವಿಚಾರಕ್ಕೆ ಜಗಳ ನಡೆದಿತ್ತು. ಆಗ ಸ್ನೇಹಿತರು ಇಬ್ಬರನ್ನೂ ರಾಜಿ ಮಾಡಿಸಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.