ADVERTISEMENT

ಪೋಡಿ ಮುಕ್ತ ಗ್ರಾಮಕ್ಕೆ ಹೊಸ ಸ್ವರೂಪ– ಕೃಷ್ಣ ಬೈರೇಗೌಡ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2023, 16:08 IST
Last Updated 4 ಡಿಸೆಂಬರ್ 2023, 16:08 IST
ಕೃಷ್ಣ ಬೈರೇಗೌಡ
ಕೃಷ್ಣ ಬೈರೇಗೌಡ   

ವಿಧಾನಸಭೆ: ‘ಪೋಡಿ ಮುಕ್ತ ಗ್ರಾಮ ಅಭಿಯಾನಕ್ಕೆ ಹೊಸ ಸ್ವರೂಪ ಮಾಡಲಾಗುವುದು. ಅರ್ಜಿ ಸಲ್ಲಿಸದಿದ್ದರೂ ಗ್ರಾಮದ ಎಲ್ಲ ಆಸ್ತಿಗಳ ಭೂಮಾಪನ ಪೂರ್ಣಗೊಳಿಸಿ, ಪೋಡಿ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಬಿಜೆಪಿಯ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘2015ರಲ್ಲಿ ನಮ್ಮದೇ (ಕಾಂಗ್ರೆಸ್‌) ಸರ್ಕಾರ ಇದ್ದಾಗ ಪೋಡಿ ಮುಕ್ತ ಗ್ರಾಮ ಅಭಿಯಾನ ಆರಂಭಿಸಲಾಗಿತ್ತು. 16,630 ಗ್ರಾಮಗಳನ್ನು ಈ ಅಭಿಯಾನಕ್ಕೆ ಆಯ್ಕೆ ಮಾಡಲಾಗಿತ್ತು. ಅಷ್ಟೂ ಗ್ರಾಮಗಳಲ್ಲಿ ಜಮೀನುಗಳ ಅಳತೆ ಪೂರ್ಣಗೊಂಡಿದೆ. 16,266 ಗ್ರಾಮಗಳಲ್ಲಿ ಪಹಣಿಗಳ ದುರಸ್ತಿ ಪೂರ್ಣಗೊಂಡಿದೆ. 20.90 ಲಕ್ಷ ಪಹಣಿಗಳನ್ನು ಸೃಜಿಸಲಾಗಿದೆ’ ಎಂದರು.

ಪೋಡಿ ಮುಕ್ತ ಗ್ರಾಮ ಅಭಿಯಾನದ ಅಡಿಯಲ್ಲಿ ಗ್ರಾಮದ ಎಲ್ಲ ಆಸ್ತಿಗಳ ಅಳತೆ, ಪಹಣಿ ಸೃಜನೆ ಆಗಬೇಕು. ಆದರೆ, ಅಧಿಕಾರಿಗಳು ಅರ್ಜಿ ಸಲ್ಲಿಸದವರ ಸ್ವತ್ತುಗಳ ಅಳತೆ ಮತ್ತು ಪೋಡಿ ಪೂರ್ಣಗೊಳಿಸುತ್ತಿಲ್ಲ. ಸ್ವಯಂಪ್ರೇರಿತವಾಗಿ ಎಲ್ಲ ಆಸ್ತಿಗಳನ್ನೂ ಅಳತೆ ಮಾಡಿ, ಪೋಡಿ ಪೂರ್ಣಗೊಳಿಸುವುದನ್ನು ಕಡ್ಡಾಯ ಮಾಡಲಾಗುವುದು ಎಂದು ತಿಳಿಸಿದರು.

ADVERTISEMENT

ರಾಜ್ಯದಲ್ಲಿ ಭೂಮಾಪಕರ ಕೊರತೆ ಇದೆ. 1,800 ಪರವಾನಗಿ ಹೊಂದಿದ ಭೂಮಾಪಕರ ಸೇವೆ ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ. 364 ಭೂಮಾಪಕರು ಮತ್ತು 27 ಭೂ ದಾಖಲೆಗಳ ಸಹಾಯಕ ನಿರ್ದೇಶಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಭೂಮಾಪನ ಮತ್ತು ಪೋಡಿ ಪ್ರಕ್ರಿಯೆಯಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಎಲ್ಲ ರೀತಿಯ ಪ್ರಯತ್ನಗಳನ್ನೂ ಸರ್ಕಾರ ಮಾಡಲಿದೆ ಎಂದರು.

‘ಪೋಡಿ ಮುಕ್ತ ಗ್ರಾಮ ಅಭಿಯಾನ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ರೈತರಿಗೆ ಅನ್ಯಾಯವಾಗುತ್ತಿದೆ. ಪ್ರಭಾವ ಉಳ್ಳವರ ಅರ್ಜಿಗಳು ಬೇಗ ವಿಲೇವಾರಿಯಾಗುತ್ತಿವೆ’ ಎಂದು ಅಶ್ವತ್ಥ ನಾರಾಯಣ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.