– ಚೇತನ್ ಬಿ.ಸಿ
ಬೆಂಗಳೂರು: ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ನೋಂದಣಿ ಮಾಡುವಾಗ ನಕಲಿ ಲಿಂಕ್ ಹಾಗೂ ಆ್ಯಪ್ಗಳ ಬಗ್ಗೆ ಎಚ್ಚರವಹಿಸಿ ಎಂದು ಬೆಂಗಳೂರು ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಸೈಬರ್ ಖದೀಮರು ಹಲವು ನಕಲಿ ಆ್ಯಪ್ ಹಾಗೂ ಲಿಂಕ್ಗಳನ್ನು ಹರಿಯಬಿಟ್ಟಿದ್ದು, ಅವುಗಳ ಮೂಲಕ ಸಾರ್ವಜನಿಕರ ದತ್ತಾಂಶ ಕದಿಯಲು ಮುಂದಾಗಿದ್ದಾರೆ ಎನ್ನುವ ವರದಿಗಳು ಬರುತ್ತಿರುವ ಬೆನ್ನಲ್ಲೇ, ಪೊಲೀಸರಿಂದ ಇಂಥಹದ್ದೊಂದು ಎಚ್ಚರಿಕೆಯ ಸಂದೇಶ ಬಂದಿದೆ.
ಗ್ಯಾರಂಟಿ ಯೋಜನೆಗಳಿಗೆ ನಾಗರಿಕರು ಸೇವಾಸಿಂಧು ಪೋರ್ಟಲ್ ಮೂಲಕ ನೋಂದಣಿ ಮಾಡಿಸಿಕೊಳ್ಳಬೇಕು. ಆದರೆ ಸೈಬರ್ ಖದೀಮರು ಹಲವು ನಕಲಿ ಆ್ಯಪ್ ಹಾಗೂ ಲಿಂಕ್ಗಳನ್ನು ಹರಿಯಬಿಟ್ಟು, ನಾಗರಿಕರ ಮಾಹಿತಿಗೆ ಕನ್ನ ಹಾಕುತ್ತಿದ್ದಾರೆ.
‘ಗ್ಯಾರಂಟಿ ಯೋಜನೆಗಳ ನೋಂದಣಿಗೆ ಸರ್ಕಾರ ಯಾವುದೇ ಆ್ಯಪ್ ಅನ್ನು ಪರಿಚಯಿಸಿಲ್ಲ. ಆದರೆ ಹಲವು ನಕಲಿ ಆ್ಯಪ್ಗಳು ಡೌನ್ಲೋಡ್ ಮಾಡಿಕೊಳ್ಳಲು ಲಭ್ಯವಿದೆ. ಫಲಾನುಭವಿಗಳು ಇದರ ಬಗ್ಗೆ ಎಚ್ಚರಿಕೆಯಿಂದಿರಬೇಕು. ಆ್ಯಪ್ಗಳನ್ನು ರಿಪೋರ್ಟ್ ಮಾಡಬೇಕು. ಈ ಬಗ್ಗೆ ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ‘ ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಸ್.ಡಿ ಶರಣಪ್ಪ ಪ್ರಜಾವಣಿಗೆ ತಿಳಿಸಿದ್ದಾರೆ.
ಅಲ್ಲದೇ ಸೇವಾಸಿಂಧು ವೆಬ್ಸೈಟ್ ಮೂಲಕವೇ ಯೋಜನೆಗಳಿಗೆ ನೋಂದಣಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿರುವ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಲಾಗುತ್ತಿರುವ ನಕಲಿ ಲಿಂಕ್ಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಹೇಳಿದ್ದಾರೆ.
‘ಸದ್ಯ ನಕಲಿ ಲಿಂಕ್ಗಳ ಮೂಲಕ ನೋಂದಣಿ ಮಾಡಿ ಮೋಸಕ್ಕೊಳಗಾಗಿರುವ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ಆದರೆ ಇಂಥ ಕೃತ್ಯಗಳು ಹೆಚ್ಚಾಗುತ್ತಿವೆ. ಜನ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.