ಬೆಂಗಳೂರು: ಅವ್ಯವಹಾರ ಆರೋಪಕ್ಕೆ ಒಳಗಾಗಿರುವ ಬಸವನಗುಡಿಯ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕಿನ ವಜಾಗೊಂಡ ಆಡಳಿತ ಮಂಡಳಿ ಪದಾಧಿಕಾರಿಗಳು, ಅವರ ಕುಟುಂಬದ ಸದಸ್ಯರ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ.
ಬ್ಯಾಂಕ್ ಅಕ್ರಮ ಕುರಿತು ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳ ಸೂಚನೆಯ ಮೇರೆಗೆ ಬ್ಯಾಂಕಿನ ಹಿಂದಿನ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ಸಿಇಒ ಮತ್ತು ಅವರ ಹತ್ತಿರದ ಸಂಬಂಧಿಕರ ಖಾತೆಗಳನ್ನು
ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬ್ಯಾಂಕಿನಲ್ಲಿ ಸಾಲ ಪಡೆದು ಮರು ಪಾವತಿ ಮಾಡದವರು ಹಾಗೂ ಅವರ ಕುಟುಂಬದ ಸದಸ್ಯರ ಖಾತೆಗಳನ್ನೂ
ಸ್ಥಗಿತಗೊಳಿಸಲಾಗಿದೆ. 2 ಸಾವಿರಕ್ಕೂ ಹೆಚ್ಚು ಠೇವಣಿದಾರರಿಗೆ ಹಣ ಹಿಂತಿ ರು ಗಿಸದೆ ವಂಚಿಸಿದ, ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ, ನಕಲಿ ಖಾತೆಗಳ ಮುಖಾಂತರ ಸಾಲ ಪಡೆದವರ ವಿವರ ಗಳನ್ನು ಸಿಐಡಿ ಮತ್ತು ಜಾರಿ ನಿರ್ದೇಶ ನಾಲಯಕ್ಕೆ ಕೊಡಲಾಗಿದೆ ಎಂದು ಮೂಲಗಳು ಹೇಳಿವೆ.
ಬ್ಯಾಂಕಿನಲ್ಲಿ ಒಟ್ಟು 4 ಸಾವಿರ ಖಾತೆಗಳಿವೆ. ಇದರಲ್ಲಿ 2 ಸಾವಿರ ಠೇವಣಿ ಖಾತೆಗಳು, 1,400 ಸಾಲದ ಖಾತೆಗಳು. ಕೆಲ ಸಾಲಕ್ಕೆ ಆಸ್ತಿ ಅಡಮಾನವಿಟ್ಟು ಸಾಲ ಪಡೆಯಲಾಗಿದೆ. ಆದರೆ, ಅದಕ್ಕೆ ಸಂಬಂಧಿಸಿದ ದಾಖಲೆಗಳೇ ಇಲ್ಲ. ಕೆಲ ಖಾತೆಗಳಲ್ಲಿ ಆಸ್ತಿ ಭದ್ರತೆ ಕೊಡದೆ ಸಾಲ ಪಡೆಯಲಾಗಿದೆ. ಹಲವು ನಕಲಿ ಖಾತೆಗಳನ್ನು ತೆರೆದು ಸಾಲ ಪಡೆದು ಹಳೆಯ ಸಾಲಗಳಿಗೆ ಜಮಾ ಮಾಡ ಲಾಗಿದೆ. ಯಾವ ಖಾತೆಯಿಂದ, ಯಾವ ಖಾತೆಗೆ ಹಣ ಜಮಾ ಆಗಿದೆ. ಎಷ್ಟು ಸಾಲ ಪಡೆಯಲಾಗಿದೆ. ಆನಂತರ ನಕಲಿ ಖಾತೆಗಳ ಮೂಲಕ ಎಷ್ಟು ಸಾಲ ಪಡೆದು ಜಮಾ ಮಾಡಲಾಗಿದೆ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಹಣ ವರ್ಗಾವಣೆ ಮಾಡಿರುವ ಬ್ಯಾಂಕಿನ ಸಿಬ್ಬಂದಿಯನ್ನೇ ಈ ಕೆಲಸಕ್ಕೆ ಬಳಸಲಾಗುತ್ತಿದೆ ಎನ್ನಲಾಗಿದೆ.
ಠೇವಣಿದಾರರಿಗೆ ಇನ್ನಷ್ಟು ಹಣ
ಬ್ಯಾಂಕಿನ ಹಣಕಾಸು ಸ್ಥಿತಿ ಗತಿ ನೋಡಿಕೊಂಡು ಠೇವಣಿ ದಾರರಿಗೆ ಇನ್ನಷ್ಟು ಹಣ ಹಿಂತಿರು ಗಿಸುವ ಸಾಧ್ಯತೆ ಇದೆ.
ಈ ಬಗ್ಗೆ ಬ್ಯಾಂಕ್ ಸದ್ಯವೇ ಆರ್ಬಿಐ ಮತ್ತು ಸರ್ಕಾರಕ್ಕೆ ಶಿಫಾರಸು ಮಾಡಲಿದೆ. ಅಲ್ಲದೆ, ಠೇವಣಿದಾರರಿಗೆ ಮೇ ಮತ್ತು ಜೂನ್ ತಿಂಗಳ ಬಡ್ಡಿ ಕೊಡುವ ಸಂಭವವಿದೆ ಎಂದು ಬ್ಯಾಂಕಿನ ಮೂಲಗಳು ಹೇಳಿವೆ.
₹ 15 ಕೋಟಿ ಚೆಕ್ ಬೌನ್ಸ್!
ದೊಡ್ಡ ಸಾಲಗಾರರೊಬ್ಬರು ಬ್ಯಾಂಕಿಗೆ ನೀಡಿದ್ದ ₹ 15 ಕೋಟಿ ಮೊತ್ತದ ಚೆಕ್ ಬೌನ್ಸ್ ಆಗಿದೆ.
ಚೆಕ್ ಬೌನ್ಸ್ ಆಗುತ್ತಿದ್ದಂತೆ ಹಣ ಪಾವತಿಗೆ ಮತ್ತೊಂದು ವಾರ ಕಾಲಾವಕಾಶ ನೀಡುವಂತೆ ಅವರು ಮನವಿ ಮಾಡಿದ್ದಾರೆ. ಆದರೆ, ಸೋಮವಾರದ ನಂತರ ಅವರ ವಿರುದ್ಧ ‘ನೆಗೊಷಿಯಬಲ್ ಇನ್ಸ್ಟ್ರುಮೆಂಟ್ ಆ್ಯಕ್ಟ್’ ಅಡಿ ಕಾನೂನು ಕ್ರಮ ಜರುಗಿಸಲಾಗು ವುದು ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.