ಬೆಂಗಳೂರು: ಸಮನ್ವಯ ಸಮಿತಿ ಕನ್ನಡವೇ ಸತ್ಯ ಪ್ರತಿಷ್ಠಾನ ನಗರದಲ್ಲಿ ಭಾನುವಾರ ಹಮ್ಮಿಕೊಂಡ ‘ಎಚ್ಚೆಸ್ಕೆ ಬೆಳಕು ಒಂಬತ್ತನೆ ಆವೃತ್ತಿ’ ಕಾರ್ಯಕ್ರಮದಲ್ಲಿ ‘ಕನ್ನಡದಲ್ಲಿ ಬ್ಯಾಂಕಿಂಗ್’ ಮತ್ತು ‘ಬ್ಯಾಂಕಿಂಗ್ನಲ್ಲಿ ಕನ್ನಡ’ವನ್ನು ತರಲು ಶ್ರಮಿಸಿದ್ದ ಅಂಕಣಕಾರ ಹಾಗೂ ನಿಘಂಟು ತಜ್ಞ ಎಚ್.ಎಸ್. ಕೃಷ್ಣಸ್ವಾಮಿ ಅಯ್ಯಂಗಾರ್ (ಎಚ್ಚೆಸ್ಕೆ) ಅವರನ್ನು ಸ್ಮರಿಸಲಾಯಿತು.
ಕಾರ್ಯಕ್ರಮಕ್ಕೆ ಭಾರತೀಯ ಸ್ಟೇಟ್ ಬ್ಯಾಂಕ್ ಬೆಂಗಳೂರು ವೃತ್ತದ ಮುಖ್ಯ ಪ್ರಧಾನ ವ್ಯವಸ್ಥಾಪಕ ಕಿಶನ್ ಶರ್ಮಾ ಚಾಲನೆ ನೀಡಿ, ಕನ್ನಡದಲ್ಲಿ ಶುಭ ಹಾರೈಸಿದರು. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಕೆ. ಶಾಂತಾರಾಮ ಪೈ ಪ್ರತಿಷ್ಠಾನದ ಜಾಲತಾಣಕ್ಕೆ ಚಾಲನೆಗೆ ನೀಡಿದರು.
ಎಚ್ಚೆಸ್ಕೆ ಅವರ ‘ಸಮಗ್ರ ಪ್ರಬಂಧಗಳು’, ‘ಬ್ಯಾಂಕಿಂಗ್ ಪ್ರಪಂಚದ ಸಂಪಾದಕೀಯಗಳು’ ಕೃತಿಯ ‘ಕೇಳು ಪುಸ್ತಕ’ ಆವೃತ್ತಿಯನ್ನು ರೂಪಿಸಿ, ಯೂಟ್ಯೂಬ್ನಲ್ಲಿ ಪ್ರಚುರಪಡಿಸಿದ ಎಚ್.ಎಲ್. ಗುರುಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ಬಿ.ಎಸ್. ರವೀಂದ್ರ ಅವರು ಬ್ಯಾಂಕಿಂಗ್ ಕನ್ನಡಕ್ಕೆ ಎಚ್ಚೆಸ್ಕೆ ಅವರ ಕೊಡುಗೆಯ ಬಗ್ಗೆ ವಿವರಿಸಿದರು.
‘ಎಚ್ಚೆಸ್ಕೆ ಅವರ ಸಮಗ್ರ ಲಲಿತ ಪ್ರಬಂಧಗಳ ವೈಶಿಷ್ಟ್ಯ’ದ ಬಗ್ಗೆ ಲೋಲಾಕ್ಷಿ ಕೆರೊಡಿ, 'ಭಾರತೀಯ ಬ್ಯಾಂಕಿಂಗ್: ಕೃತಕ ಬುದ್ಧಿಮತ್ತೆಯ ಬಳಕೆ ಮತ್ತು ಸವಾಲುಗಳು’ ವಿಷಯದ ಬಗ್ಗೆ ಎಚ್. ಶ್ರೀಧರ ರಾವ್ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.