ಬೆಂಗಳೂರು: ನಗರದ ಹಲಸೂರು ಮಾರುಕಟ್ಟೆಯ ರಸ್ತೆಬದಿ ನಿಲುಗಡೆ ಮಾಡಲಾಗಿದ್ದ 10ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಕಿಡಿಗೇಡಿಗಳು ಬೆಂಕಿ ಹಾಕಿ ಸುಟ್ಟಿದ್ದಾರೆ.
ದ್ವಿಚಕ್ರ ವಾಹನಕ್ಕೆ ಬಿದ್ದ ಬೆಂಕಿಯು ಪಕ್ಕದಲ್ಲೇ ಇದ್ದ ತರಕಾರಿ ಮಾರಾಟ ಅಂಗಡಿಗೂ ತಗುಲಿ ಸುಟ್ಟು ಹೋಗಿದೆ.
ಸೋಮವಾರ ಮುಂಜಾನೆ ಘಟನೆ ನಡೆದಿದೆ. ಹೆಲ್ಮೆಟ್, ಮುಖಗವಸು ಧರಿಸಿಕೊಂಡು ಸ್ಥಳಕ್ಕೆ ಬಂದಿದ್ದ ದುಷ್ಕರ್ಮಿಗಳು ಬೆಂಕಿಹಚ್ಚಿ ಪರಾರಿ ಆಗಿದ್ದಾರೆ. ಆರೋಪಿಗಳು ಕೃತ್ಯ ಎಸಗಿ ಪರಾರಿ ಆಗುತ್ತಿರುವ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಲಸೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.
‘40 ವರ್ಷಗಳಿಂದ ಇಲ್ಲಿ ವ್ಯಾಪಾರ ಮಾಡುತ್ತಾ ಜೀವನ ಸಾಗಿಸುತ್ತಿದ್ದೆ. ನಾವು ಯಾರಿಗೂ ಅನ್ಯಾಯ ಮಾಡಿಲ್ಲ. ಯಾರೋ ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿದ್ದಾರೆ. ಆರೋಪಿಗಳನ್ನು ಬಂಧಿಸಬೇಕು’ ಎಂದು ತರಕಾರಿ ವ್ಯಾಪಾರಿ ಮಹಾಲಿಂಗಪ್ಪ ಆಗ್ರಹಿಸಿದರು.
‘ಸಿಸಿಟಿವಿ ದೃಶ್ಯಾಗಳಿಗಳನ್ನು ಸಂಗ್ರಹಿಸಲಾಗಿದೆ. ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ. ಯಾವ ಕಾರಣಕ್ಕಾಗಿ ಆರೋಪಿಗಳು ಕೃತ್ಯ ಎಸಗಿದ್ಧಾರೆ ಎಂಬುದು ಆರೋಪಿಗಳ ಬಂಧನದ ಬಳಿಕವೇ ಗೊತ್ತಾಗಲಿದೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.