ಬೆಂಗಳೂರು: ‘ಕೈಮಗ್ಗ ಉತ್ಪನ್ನಗಳ ಬಳಕೆಯಿಂದ ಹಳ್ಳಿ ಹಳ್ಳಿಗಳಲ್ಲಿಯೂ ಉದ್ಯೋಗ ಸೃಷ್ಟಿಯಾಗುತ್ತದೆ. ಹಾಗಾಗಿ, ‘ಪವಿತ್ರವಸ್ತ್ರ ಅಭಿಯಾನ’ವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ರಂಗಕರ್ಮಿ ಪ್ರಸನ್ನ ತಿಳಿಸಿದರು.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚರಕ, ದೇಸಿ, ಅಖಿಲ ಭಾರತ ಕೈಮಗ್ಗ ಸಂಘಟನೆಗಳ ಒಕ್ಕೂಟ ಹಾಗೂ ಗ್ರಾಮ ಸೇವಾ ಸಂಘ ಒಟ್ಟಾಗಿ ಇದೇ 6ರಿಂದ 10ರವರೆಗೆ ಕುಮಾರಕೃಪಾ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ‘ಪವಿತ್ರವಸ್ತ್ರ ಅಭಿಯಾನ’ವನ್ನು ಆಯೋಜಿಸಿವೆ. ಈ ಅಭಿಯಾನವನ್ನು ಕೇಂದ್ರ ಸಚಿವೆಶೋಭಾ ಕರಂದ್ಲಾಜೆ ಉದ್ಘಾಟಿಸಲಿದ್ದಾರೆ.ಕರಕುಶಲ ಹಾಗೂ ಕೈಮಗ್ಗದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಬೆಳಿಗ್ಗೆ 10ರಿಂದ ರಾತ್ರಿ 8 ಗಂಟೆಯವರೆಗೆ ನಡೆಯುತ್ತದೆ’ ಎಂದು ಹೇಳಿದರು.
‘ಖಾದಿ ಮತ್ತು ಕೈಮಗ್ಗ ಎನ್ನುವುದು ಪವಿತ್ರವಾದ ಬ್ರ್ಯಾಂಡ್. ಇದರ ಕಲಬೆರಕೆಯಿಂದ ನೂಲುಗಾರ್ತಿಯರು ಹಾಗೂ ನೇಕಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದಕ್ಕೆ ಕಡಿವಾಣ ಹಾಕಿದರೆ ಮಾತ್ರ ಗ್ರಾಮೀಣ ಜನತೆಗೆ ನ್ಯಾಯ ಸಿಗಲಿದೆ. ಕೋವಿಡ್ ಕಾಣಿಸಿಕೊಂಡ ಬಳಿಕ ರೈತರು, ಕುಶಲಕರ್ಮಿಗಳು ಹಾಗೂ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಗ್ಗಗಳು ಹಾಗೂ ಸಣ್ಣ ಕಾರ್ಖಾನೆಗಳು ಸ್ಥಗಿತಗೊಂಡಿವೆ. ಲಕ್ಷಾಂತರ ಮೀಟರ್ಗಳಷ್ಟು ಬಟ್ಟೆಗಳು ಮಾರಾಟವಾಗದೆಉಳಿದಿವೆ’ ಎಂದು ಬೇಸರ ವ್ಯಕ್ತಪಡಿಸಿದರು.
ಚರಕ ಸಂಸ್ಥೆಯ ಪದ್ಮಶ್ರೀ, ದೇಸಿ ಸಂಸ್ಥೆಯ ಕೃಷ್ಣ ಹಾಗೂ ಗ್ರಾಮಸೇವಾ ಸಂಘದ ಅಭಿಲಾಷ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.