ADVERTISEMENT

ಎರಡು ಜಿಲ್ಲೆಗಳಲ್ಲಿ ಶೇ 70ರಷ್ಟು ಅಂಗವಿಕಲರಿಗೆ ವಿಮೆ ಇಲ್ಲ: ಸಮೀಕ್ಷಾ ವರದಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2025, 23:30 IST
Last Updated 22 ಏಪ್ರಿಲ್ 2025, 23:30 IST
<div class="paragraphs"><p>ಆಸ್ಥಾ ಹಾಗೂ ಎನ್‌ಸಿಪಿಇಡಿಪಿ ಸಹಯೋಗದಲ್ಲಿ ನಡೆಸಿರುವ ‘ಅಂಗವಿಕಲರ ಆರೋಗ್ಯ ಸ್ಥಿತಿ-ಗತಿಗಳ ಸಮೀಕ್ಷಾ ವರದಿ’ಯನ್ನು ಮಂಗಳವಾರ ಬಿಡುಗಡೆ ಮಾಡಲಾಯಿತು. ಅಸ್ಥಾ ಸಂಸ್ಥೆಯ ಮುಖ್ಯ ಸಂಯೋಜಕ‌ ಸುನೀಲ್‌ ಜೈನ್‌, ತುಮಕೂರು ವಿಶ್ವವಿದ್ಯಾಲಯದ ಪ್ರೊ.ಪರಶುರಾಮ್‌,&nbsp; ಎನ್‌ಸಿಪಿಇಡಿಪಿ ಕಾರ್ಯನಿರ್ವಹಕ ನಿರ್ದೇಶಕ ಅರ್ಮಾನ್‌ ಅಲಿ, ಡಾ. ವಹಿದಾ ಉಪಸ್ಥಿತರಿದ್ದರು.</p></div>

ಆಸ್ಥಾ ಹಾಗೂ ಎನ್‌ಸಿಪಿಇಡಿಪಿ ಸಹಯೋಗದಲ್ಲಿ ನಡೆಸಿರುವ ‘ಅಂಗವಿಕಲರ ಆರೋಗ್ಯ ಸ್ಥಿತಿ-ಗತಿಗಳ ಸಮೀಕ್ಷಾ ವರದಿ’ಯನ್ನು ಮಂಗಳವಾರ ಬಿಡುಗಡೆ ಮಾಡಲಾಯಿತು. ಅಸ್ಥಾ ಸಂಸ್ಥೆಯ ಮುಖ್ಯ ಸಂಯೋಜಕ‌ ಸುನೀಲ್‌ ಜೈನ್‌, ತುಮಕೂರು ವಿಶ್ವವಿದ್ಯಾಲಯದ ಪ್ರೊ.ಪರಶುರಾಮ್‌,  ಎನ್‌ಸಿಪಿಇಡಿಪಿ ಕಾರ್ಯನಿರ್ವಹಕ ನಿರ್ದೇಶಕ ಅರ್ಮಾನ್‌ ಅಲಿ, ಡಾ. ವಹಿದಾ ಉಪಸ್ಥಿತರಿದ್ದರು.

   

ಬೆಂಗಳೂರು: ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಶೇ 70ರಿಂದ ಶೇ 96ರಷ್ಟು ಅಂಗವಿಕಲರಿಗೆ ಆರೋಗ್ಯ ವಿಮೆ ದೊರೆತಿಲ್ಲ, ಶೇ 90ರಷ್ಟು ಮಂದಿ ಯಾವುದೇ ಸಹಾಯಕ ಸಾಧನ ಬಳಸುತ್ತಿಲ್ಲ ಹಾಗೂ ಶೇ 95ರಷ್ಟು ಅಂಗವಿಕಲರ ಕುಟುಂಬದ ವಾರ್ಷಿಕ ಆದಾಯ ₹1 ಲಕ್ಷಕ್ಕಿಂತ ಕಡಿಮೆ ಇದೆ...

ಇವು ಅಸ್ಥಾ ಹಾಗೂ ಅಂಗವಿಕಲರ ರಾಷ್ಟ್ರೀಯ ಉದ್ಯೋಗ ಉತ್ತೇಜನ ಕೇಂದ್ರದ(ಎನ್‌ಸಿಪಿಇಡಿಪಿ) ಸಹಯೋಗದಲ್ಲಿ ಈ ಎರಡೂ ಜಿಲ್ಲೆಗಳಲ್ಲಿ ನಡೆಸಿರುವ ‘ಅಂಗವಿಕಲರ ಆರೋಗ್ಯ ಸ್ಥಿತಿ–ಗತಿಗಳ ಸಮೀಕ್ಷೆ’ಯ ವರದಿಯಲ್ಲಿರುವ ಪ್ರಮುಖ ಅಂಶಗಳು.

ADVERTISEMENT

ಎರಡೂ ಜಿಲ್ಲೆಗಳ 758 ಅಂಗವಿಕಲರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. 2024–25ರಲ್ಲಿ 12 ತಿಂಗಳ ಅವಧಿಯಲ್ಲಿ ಈ ಸಮೀಕ್ಷೆ ನಡೆದಿದೆ. ಅಂಗವಿಕಲರ ಮುಖ್ಯ ಆಯುಕ್ತರ ಕಚೇರಿ (ಸಿಸಿಪಿಡಿ) ಮತ್ತು ಅಂಗವಿಕಲ ಕಲ್ಯಾಣ ಇಲಾಖೆಯ ಜಿಲ್ಲಾ ಕಚೇರಿಗಳು ಸಮೀಕ್ಷೆಗೆ ಸಹಕಾರ ನೀಡಿವೆ.

ಅಂಗವಿಕಲರ ಆರೋಗ್ಯ ಸ್ಥಿತಿಗತಿಗೆ ಸಂಬಂಧಿಸಿದ ಇಂಥ ಹಲವು ಅಂಶಗಳಿರುವ ಈ ವರದಿಯನ್ನು ನಗರದಲ್ಲಿ ಮಂಗಳವಾರ ನಡೆದ ಕಾರ್ಯಾಗಾರದಲ್ಲಿ ಬಿಡುಗಡೆ ಮಾಡಲಾಯಿತು.

ವರದಿಯ ಪ್ರಮುಖ ಅಂಶಗಳು:

* ಒಟ್ಟು ಅಂಗವಿಕಲರ ಸಂಖ್ಯೆಯಲ್ಲಿ ಅರ್ಧದಷ್ಟು ಮಂದಿ ತಾವು ಪಡೆಯುವ ಮಾಸಿಕ ಪಿಂಚಣಿ (₹2000)ಯಲ್ಲಿ ಕಾಲು ಭಾಗದಷ್ಟನ್ನು ಮಾನಸಿಕ ಆರೋಗ್ಯಕ್ಕಾಗಿ ವೆಚ್ಚ ಮಾಡುತ್ತಿದ್ದಾರೆ.

*ಬಹಳಷ್ಟು ಅಂಗವಿಕಲರು ಸರ್ಕಾರಿ ಯೋಜನೆಗಳನ್ನು ಪಡೆಯಲು ಅವಶ್ಯವಿರುವ ಅಂಗವಿಕಲರ ಗುರುತಿನ ಚೀಟಿ ಹೊಂದಿಲ್ಲ ಎಂಬುದು ಸಮೀಕ್ಷಾ ವರದಿಯಲ್ಲಿ ಉಲ್ಲೇಖವಾಗಿದೆ.

* ಬಹುತೇಕ ಅಂಗವಿಕಲರು ನಿರುದ್ಯೋಗಿಗಳು. ಜೀವನೋಪಾಯಕ್ಕಾಗಿ ತಮ್ಮ ಕುಟುಂಬಗಳ ಮೇಲೆ ಅವಲಂಬಿತರಾಗಿದ್ದಾರೆ ಎಂದು ವರದಿ ಹೇಳಿದೆ.

* ಅಂಗವಿಕಲರಿಗೆ ಲಭ್ಯವಾಗುತ್ತಿರುವ ಆರೋಗ್ಯ ಸೇವೆಯ ಸ್ಥಿತಿ ಮತ್ತು ಸೇವೆಗಳಲ್ಲಿನ ಅಂತರವನ್ನು ನಿವಾರಿಸಲು ಮತ್ತು ಅಂಗವಿಕಲರ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ವಿಮಾ ಯೋಜನೆಗಳು ಮತ್ತು ಮೂಲಸೌಕರ್ಯ ವಿನ್ಯಾಸಗೊಳಿಸುವುದು ಅನಿವಾರ್ಯ ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.

ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ಅಸ್ಥಾ ಸಂಸ್ಥೆಯವರು ತಿಳಿಸಿದರು.

‘ಅಂಗವಿಕಲರನ್ನು ನೋಡುವ ರೀತಿ ಬದಲಾಗಲಿ’

‘ನಮ್ಮ ದೇಶದಲ್ಲಿ ಅಂಗವಿಕಲರನ್ನು ಅನಾರೋಗ್ಯಪೀಡಿತರಂತೆ ನಡೆಸಿಕೊಳ್ಳಲಾಗುತ್ತಿದೆ. ಈ ಮನೋಭಾವ ಬದಲಾಗಬೇಕು’ ಎಂದು ಎನ್‌ಸಿಪಿಇಡಿಪಿ ಕಾರ್ಯನಿರ್ವಾಹಕ ನಿರ್ದೇಶಕ ಅರ್ಮಾನ್‌ ಅಲಿ ಪ್ರತಿಪಾದಿಸಿದರು.

ಸಮೀಕ್ಷಾ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ವಿಮಾ ಯೋಜನೆಯಲ್ಲಿ ಮಹಿಳೆಯರು ಹಿರಿಯ ನಾಗರಿಕರಿಗೆ ವಿಶೇಷ ಸವಲತ್ತು ನೀಡಲಾಗಿದೆ. ಆದರೆ ಅಂಗವಿಕಲರಿಗೆ ಯಾವುದೇ ವಿಶೇಷ ಸಲವತ್ತು ಇಲ್ಲ’ ಎಂದರು. ‘ನಮ್ಮ ದೇಶದಲ್ಲಿ ಅಂಗವಿಕಲರು ಓಡಾಡಲು ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲ. ಗಾಲಿ ಕುರ್ಚಿ ಸಾಗಲು ಸೂಕ್ತ ಮಾರ್ಗಗಳೇ ಇಲ್ಲ. ಈ ಬಗ್ಗೆ ಸರ್ಕಾರ ಯಾಕೆ ನಿರ್ಲಕ್ಷ್ಯ ವಹಿಸುತ್ತಿದೆ. ನಮ್ಮನ್ನೂ ಎಲ್ಲರಂತೆಯೇ ನೋಡಿ ನಮಗೆ ನೀಡಬೇಕಾದ ಮೂಲಸೌಕರ್ಯಗಳನ್ನು ನಮ್ಮ ಹಕ್ಕು ಎಂದು ಪರಿಗಣಿಸಿ’ ಎಂದು ಆಗ್ರಹಿಸಿದರು.

ಹೃದ್ರೋಗ ತಜ್ಞ ಡಾ. ವಿವೇಕ್ ಜವಳಿ ಮಾತನಾಡಿ ‘ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಈಗೀಗ ಅಂಗವಿಕಲರಿಗೆ ಸಿಗಬೇಕಾದ ಎಲ್ಲ ಸವಲತ್ತುಗಳು ಸಿಗುತ್ತಿವೆ. ಅದೇ ರೀತಿ ಸರ್ಕಾರದ ಎಲ್ಲ ಸೌಲಭ್ಯಗಳೂ ತಲುಪುತ್ತಿವೆಯೇ ಎಂಬುದರ ಬಗ್ಗೆ ಗಮನಹರಿಸಬೇಕು’ ಎಂದರು. ‌ಕಾರ್ಯಕ್ರಮದಲ್ಲಿ ಅಸ್ಥಾ ಮುಖ್ಯ ಸಂಯೋಜಕ ಸುನೀಲ್ ಜೈನ್ ತುಮಕೂರು ವಿಶ್ವವಿದ್ಯಾಲಯದ ಪ್ರೊ. ಪರಶುರಾಮ್‌ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.