ಬೆಂಗಳೂರು: ‘ವೈದ್ಯರು ರೋಗಿಗಳಿಗೆ ಚಿಕಿತ್ಸೆ ಒದಗಿಸುವ ಜತೆಗೆ ಗುಣಮುಖರಾಗುವ ಬಗ್ಗೆ ಭರವಸೆ ನೀಡಬೇಕು. ವೈದ್ಯರ ಸಾಂತ್ವನದ ಮಾತುಗಳು ರೋಗ ಗುಣಪಡಿಸಲು ನಿರ್ಣಾಯಕ’ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಸರ್ಜಾಪುರದಲ್ಲಿ ನಿರ್ಮಾಣವಾಗಿರುವ 250 ಹಾಸಿಗೆಗಳ ಸ್ಪರ್ಶ್ ಆಸ್ಪತ್ರೆ ಸಮೂಹದ ಒಂಬತ್ತನೆ ಶಾಖೆಗೆ ಭಾನುವಾರ ಚಾಲನೆ ನೀಡಿ, ಶುಭಹಾರೈಸಿದರು.
ಸ್ಪರ್ಶ್ ಆಸ್ಪತ್ರೆ ಸಮೂಹದ ಅಧ್ಯಕ್ಷ ಡಾ.ಶರಣ್ ಶಿವರಾಜ್ ಪಾಟೀಲ, ‘ಬೆಂಗಳೂರು ದೇಶದ ಐಟಿ ರಾಜಧಾನಿಯೆಂದು ಬಿಂಬಿತವಾದಂತೆ, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆಯೂ ಕೆಲವೇ ವರ್ಷಗಳಲ್ಲಿ ನಾಯಕನಾಗಿ ಹೊರಹೊಮ್ಮಲಿದೆ. ಬೆಂಗಳೂರು ಅಗಾಧವಾಗಿ ಬೆಳವಣಿಗೆ ಹೊಂದಿರುವ ಕಾರಣ, ಇಲ್ಲಿನ ಜನರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಲು ಆಸ್ಪತ್ರೆಯ ಜಾಲ ವಿಸ್ತರಿಸಲಾಗುತ್ತಿದೆ. ಮುಂಬರುವ ವರ್ಷಗಳಲ್ಲಿ ರಾಜ್ಯದ ಇತರ ಭಾಗಗಳಲ್ಲಿಯೂ ಅಗತ್ಯತೆ ಅನುಸಾರ ಆಸ್ಪತ್ರೆಯ ಶಾಖೆ ಪ್ರಾರಂಭಿಸಲಾಗುವುದು’ ಎಂದರು.
‘ಸ್ಪರ್ಶ್ ಆಸ್ಪತ್ರೆ ಸಮೂಹವು ಪ್ರತಿ ವರ್ಷ ನೂರಕ್ಕೂ ಅಧಿಕ ಶಿಕ್ಷಕರು ಮತ್ತು ಮಕ್ಕಳಿಗೆ ಉಚಿತವಾಗಿ ದೈಹಿಕ ಊನತೆ ಸರಿಪಡಿಸುವ ಶಸ್ತ್ರಚಿಕಿತ್ಸೆಗಳನ್ನು ನಡೆಸುತ್ತಿದೆ. ಈ ಮೂಲಕ ಸಾಮಾಜಿಕ ಜವಾಬ್ದಾರಿ ಮೆರೆಯುತ್ತಿದೆ’ ಎಂದು ಹೇಳಿದರು.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ, ‘ಆಸ್ಪತ್ರೆಗಳಿಗೆ ನರಳುತ್ತಾ ಬರುವವರು, ನಗು ನಗುತ್ತಾ ಹೋಗುವಂತಾಗಬೇಕು. ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಎಲ್ಲರಿಗೂ ಸಿಗಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.