ADVERTISEMENT

ಕರುವೊಂದನ್ನು ರಕ್ಷಿಸಿದ್ದ ಇನ್‌ಸ್ಪೆಕ್ಟರ್ ಮಹಮ್ಮದ್ ರಫೀ ಹೃದಯಾಘಾತದಿಂದ ಸಾವು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 11:30 IST
Last Updated 21 ಅಕ್ಟೋಬರ್ 2021, 11:30 IST
ಇನ್‌ಸ್ಪೆಕ್ಟರ್ ಮಹಮ್ಮದ್ ರಫೀ
ಇನ್‌ಸ್ಪೆಕ್ಟರ್ ಮಹಮ್ಮದ್ ರಫೀ   

ಬೆಂಗಳೂರು: ರಾಜ್ಯ ಅಪರಾಧ ದಾಖಲಾತಿ ವಿಭಾಗದ (ಎಸ್‌ಸಿಆರ್‌ಬಿ) ಇನ್‌ಸ್ಪೆಕ್ಟರ್ ಮಹಮ್ಮದ್ ರಫೀ (50) ಅವರು ಹೃದಯಾಘಾತದಿಂದಾಗಿ ಗುರುವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ.

ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.

ಮೈಸೂರಿನ ಮಹಮ್ಮದ್ ರಫೀ, ಬೆಂಗಳೂರು ಕಮಿಷನರೇಟ್‌ ವ್ಯಾಪ್ತಿಯ ಬೈಯಪ್ಪನಹಳ್ಳಿ ಠಾಣೆ, ಈಶಾನ್ಯ ವಿಭಾಗದ ಸೈಬರ್‌ ಕ್ರೈಂ ಠಾಣೆ ಇನ್‌ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ವಾರದ ಹಿಂದಷ್ಟೇ ಅವರನ್ನು ಎಸ್‌ಸಿಆರ್‌ಬಿಗೆ ವರ್ಗಾಯಿಸಲಾಗಿತ್ತು.

ADVERTISEMENT

ಬೈಯಪ್ಪನಹಳ್ಳಿ ಠಾಣೆ ಇನ್‌ಸ್ಪೆಕ್ಟರ್ ಆಗಿದ್ದ ವೇಳೆಯಲ್ಲಿ ಮಹಮ್ಮದ್ ರಫೀ ಅವರು, ಅಪಾಯಕ್ಕೆ ಸಿಲುಕಿದ್ದ ಕರುವೊಂದನ್ನು ರಕ್ಷಿಸಿದ್ದರು. ಕರು ಮಹಮ್ಮದ್ ಅವರ ಜೊತೆಯಲ್ಲೇ ಠಾಣೆಗೆ ಬಂದಿತ್ತು. ನಂತರ, ಅದಕ್ಕೆ ಭೀಮಾ ಎಂಬ ಹೆಸರಿಟ್ಟು ಮಹಮ್ಮದ್ ಅವರೇ ಸಾಕುತ್ತಿದ್ದರು.

ಕರುವಿನೊಂದಿಗೆ ಮಹಮ್ಮದ್ ರಫೀ

‘ಮನೆಯಲ್ಲಿ ಸ್ನಾನಕ್ಕೆ ಹೊರಟಿದ್ದ ವೇಳೆ ಮಹಮ್ಮದ್ ರಫೀ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಸುಸ್ತಾಗಿ ಪ್ರಜ್ಞೆ ತಪ್ಪಿದ್ದ ಅವರನ್ನು ಫೋರ್ಟಿಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು. ಸದ್ಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಲಾಗುವುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.