ಬೆಂಗಳೂರು: ನಗರದಲ್ಲಿ ಶನಿವಾರ ಮಧ್ಯಾಹ್ನದ ಬಳಿಕ ಮುಂಗಾರು ಚುರುಕು ಪಡೆದಿದ್ದು, ವಿವಿಧೆಡೆ ಜೋರು ಮಳೆಯಾಗಿದೆ.
ಕಳೆದೆರಡು ದಿನಗಳಿಂದ ನಿರಂತರವಾಗಿ ಜಿಟಿಜಿಟಿಮಳೆ ಸುರಿಯುತ್ತಿತ್ತು. ಶನಿವಾರ ಬೆಳಿಗ್ಗೆ ಸಾಧಾರಣ ಮಳೆಯಾಗಿದ್ದರೆ, ಮಧ್ಯಾಹ್ನದ ನಂತರ ಜೋರು ಮಳೆಯಿಂದ ವಾತಾವರಣ ಮತ್ತಷ್ಟು ತಂಪಾಯಿತು.
ವಾರಾಂತ್ಯದ ಸಂಭ್ರಮಕ್ಕೆ ಮನೆಯಿಂದ ಹೊರಹೋಗಲು ನಿರ್ಧರಿಸಿದ್ದ ಬಹುತೇಕರು, ಮನೆಯಲ್ಲೇ ಕಾಲಕಳೆದರು. ಮಳೆ ಲೆಕ್ಕಿಸದೇ ಮನೆಯಿಂದ ಹೊರಬಂದಿದ್ದವರು ಮಳೆಯನ್ನು ಸಂಭ್ರಮಿಸುತ್ತಲೇ ಖರೀದಿಯಲ್ಲಿ ತೊಡಗಿದ್ದ ದೃಶ್ಯ ಕಂಡುಬಂತು. ಮಳೆಯಿಂದ ರಕ್ಷಣೆ ಪಡೆಯಲು ನಾಗರಿಕರು ಕೊಡೆಯ ಮೊರೆ ಹೋಗಿದ್ದರು.
ಮಾಗಡಿ ರಸ್ತೆ, ಕೆಂಗೇರಿ, ರಾಜರಾಜೇಶ್ವರಿ ನಗರ, ಕೆಂಗೇರಿ ಉಪನಗರ, ಅತ್ತಿಗುಪ್ಪೆ, ಅರಮನೆ ಮೈದಾನ, ಜಾಲಹಳ್ಳಿ, ರಾಜಾಜಿನಗರ, ನಾಗಸಂದ್ರ, ಯಲಹಂಕ, ಪೀಣ್ಯ, ದಾಸರಹಳ್ಳಿ, ಕಮ್ಮಗೊಂಡನಹಳ್ಳಿ, ಮಲ್ಲೇಶ್ವರ, ಹೆಬ್ಬಾಳ, ವಿಜಯನಗರ, ಮತ್ತಿಕೆರೆ, ಆರ್.ಟಿ.ನಗರ, ಶಿವಾಜಿನಗರ, ಲಾಲ್ಬಾಗ್, ಕೆ.ಆರ್.ಮಾರುಕಟ್ಟೆ, ಬಸವನಗುಡಿ ಹಾಗೂ ಜಯನಗರದ ಭಾಗದಲ್ಲೂ ಮಳೆ ಸುರಿಯಿತು.
ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ಗೆ ವಾರಾಂತ್ಯದ ಖರೀದಿಗೆ ಬಂದಿದ್ದವರು ಮಳೆಯಲ್ಲಿ ನೆನೆಯುತ್ತಲೇ ಸಾಮಗ್ರಿ ಖರೀದಿಸಿದರು.
ಮಳೆಯಿಂದ ಬಸವನಗುಡಿಯ ನ್ಯಾಷನಲ್ ಕಾಲೇಜು ಆಟದ ಮೈದಾನದ ಪಕ್ಕದಲ್ಲಿ ಶುಕ್ರವಾರ ರಾತ್ರಿ ಬೃಹತ್ ಮರ ಕಾರುಗಳ ಮೇಲೆ ಬಿದ್ದು ಮಾಲೀಕರಿಗೆ ನಷ್ಟವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.