ADVERTISEMENT

ಫೋನ್‌ಪೇ ಮೂಲಕ ಲಂಚ: ಮಾಹಿತಿ ಪಡೆಯುವಂತೆ ಹೈಕೋರ್ಟ್ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2021, 18:47 IST
Last Updated 13 ಫೆಬ್ರುವರಿ 2021, 18:47 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಫೋನ್‌ಪೇ ಮೂಲಕ ಪೊಲೀಸ್ ಕಾನ್‌ಸ್ಟೇಬಲ್‌ಗೆ ಹಣ ಪಾವತಿ ಮಾಡಿರುವ ಸಂಬಂಧ ಮಾಹಿತಿ ಪಡೆಯುವಂತೆ ಸರ್ಕಾರಿ ವಕೀಲರಿಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಕಬ್ಬಿಣದ ಸರಳು ಕಳ್ಳತನ ಪ್ರಕರಣ ದಾಖಲಿಸುವ ಬೆದರಿಕೆ ಹಾಕಿ ಐವರು ಪೊಲೀಸರು ₹15 ಲಕ್ಷ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿ ಅರ್ಜಿದಾರರಾದ, ಗುಜರಿ ವ್ಯವಹಾರ ನಡೆಸುವ ಹೊಸಕೋಟೆ ತಾಲ್ಲೂಕಿನ ಯಾರೋಬ್, ಮುಸ್ತಾಕ್ ಪಾಷಾ, ಅಫ್ರೋಜ್ ಮತ್ತು ಸೈಯದ್ ಬಕ್ಷ್ ದೂರಿದ್ದಾರೆ.

‘ಜ.14ರಂದು ನಮ್ಮ ಅಂಗಡಿಗೆ ಬಂದಿದ್ದ ಒಬ್ಬ ಪೊಲೀಸ್ ಇನ್‌ಸ್ಪೆಕ್ಟರ್‌ ಮತ್ತು ನಾಲ್ವರು ಕಾನ್‌ಸ್ಟೇಬಲ್‌ಗಳು ನಮ್ಮ ಮೇಲೆ ಹಲ್ಲೆ ನಡೆಸಿದರು. ಕಬ್ಬಿಣದ ಸರಳು ಕಳ್ಳತನದ ಪ್ರಕರಣ ತಪ್ಪಿಸಲು ₹25 ಲಕ್ಷ ಲಂಚ ಕೇಳಿದರು. ಅದೇ ದಿನ ₹15 ಲಕ್ಷ ನೀಡಲಾಗಿದೆ’ ಎಂದು ಆರೋಪಿಸಿದ್ದಾರೆ.

ADVERTISEMENT

‘ಎನ್‌.ಚಂದ್ರಶೇಖರ್ ಎಂಬ ಕಾನ್‌ಸ್ಟೆಬಲ್‌ಗೆ ಫೋನ್‌–ಪೇ ಆ್ಯಪ್ ಮೂಲಕ ₹4 ಸಾವಿರ ಪಾವತಿಸಲಾಗಿದೆ. ಈ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳಿಗೂ ದೂರು ನೀಡಲಾಗಿದೆ’ ಎಂದೂ ವಿವರಿಸಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ಪೀಠ, ರಾಜ್ಯ ಸರ್ಕಾರ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ನಗರ ಪೊಲೀಸ್ ಕಮಿಷನರ್ ಅವರಿಗೆ ನೋಟಿಸ್ ನೀಡಲು ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.