ಬೆಂಗಳೂರು: ‘ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಆರೋಪಿಯ ಗೈರುಹಾಜರಿಯಲ್ಲಿ ವಿಚಾರಣೆ ಮುಂದುವರಿಸಲು ಅನುವಾಗುವಂತೆ, ಅಪರಾಧ ದಂಡ ಸಂಹಿತೆ ಅಥವಾ ನೆಗೋಷಿಯೆಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆ–1881ಕ್ಕೆ ಸೂಕ್ತ ತಿದ್ದುಪಡಿ ತಂದರೆ ಈ ಕುರಿತ ಪ್ರಕರಣಗಳ ವಿಲೇವಾರಿಗೆ ಸಹಾಯಕವಾಗುತ್ತದೆ’ ಎಂದುಹೈಕೋರ್ಟ್ ಅಭಿಪ್ರಾಯಪಟ್ಟಿದೆ.
‘ನನ್ನ ಅನುಪಸ್ಥಿತಿಯಲ್ಲಿ ಸೆಷನ್ಸ್ ನ್ಯಾಯಾಲಯ ನನ್ನನ್ನು ಅಪರಾಧಿ ಎಂದು ನಿರ್ಧರಿಸಿದೆ’ ಎಂದು ಆಕ್ಷೇಪಿಸಿ ಶಿವಮೊಗ್ಗದ ಜಿ.ಎಚ್.ಅಬ್ದುಲ್ ಖಾದ್ರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ,‘ವಿಶೇಷ ಕಾಯ್ದೆಗಳಲ್ಲಿ ಆರೋಪಿಯ ಹಾಜರಿ ಇಲ್ಲದೆಯೇ ವಿಚಾರಣೆ ನಡೆಸಲು ಅನುಕೂಲವಾಗುವಂತೆ ಕೆಲವು ಕಾಯ್ದೆಗಳಿಗೆ ಸೂಕ್ತ ತಿದ್ದುಪಡಿ ತರುವ ಬಗ್ಗೆ ಶಾಸಕಾಂಗ ಆಲೋಚಿಸಬೇಕು. ತಿದ್ದುಪಡಿ ತಂದರೆ, ಆರೋಪಿ ಸಮನ್ಸ್ ಜಾರಿಯಿಂದ ತಪ್ಪಿಸಿಕೊಳ್ಳುವ ಅಥವಾ ಆತನ ವಿರುದ್ಧ ವಾರಂಟ್ ಜಾರಿಗೊಳಿಸುವ
ಪ್ರಕ್ರಿಯೆಯನ್ನು ತಡೆಯಲು ನೆರವಾಗುತ್ತದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ಮತ್ತು ಸೆಷನ್ಸ್ ಕೋರ್ಟ್ ನೀಡಿದ್ದ ಎರಡು ಪ್ರತ್ಯೇಕ ತೀರ್ಪುಗಳನ್ನು ರದ್ದುಪಡಿಸಿರುವ ನ್ಯಾಯಪೀಠ,ಪ್ರಕರಣವನ್ನು ಪುನರ್ ವಿಚಾರಣೆ ನಡೆಸಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸೂಚಿಸಿದೆ. ಆರೋಪಿ ಮತ್ತು ದೂರುದಾರರನ್ನು ವಿಚಾರಣೆಗೆ ಹಾಜರಾಗುವಂತೆಯೂ ನಿರ್ದೇಶಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.