ADVERTISEMENT

ಲಾಕ್‌ಡೌನ್: ರಸ್ತೆಗಿಳಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 20:24 IST
Last Updated 8 ಏಪ್ರಿಲ್ 2020, 20:24 IST
ಲಾಕ್‌ಡೌನ್ ಪರಿಶೀಲಿಸಿದ ಸಚಿವ ಬಸವರಾಜ ಬೊಮ್ಮಾಯಿ
ಲಾಕ್‌ಡೌನ್ ಪರಿಶೀಲಿಸಿದ ಸಚಿವ ಬಸವರಾಜ ಬೊಮ್ಮಾಯಿ   

ಬೆಂಗಳೂರು: ಲಾಕ್‌ಡೌನ್‌ ನಗರದಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗಿದೆಯೇ ಎಂದು ಪರಿಶೀಲಿಸಲು ಗೃಹ ಸಚಿವ ಬಸವರಾಜ ಬೊಮ್ಮಾಯಿ ಬುಧವಾರ ಖುದ್ದು ರಸ್ತೆಗಿಳಿದಿದ್ದರು.

ಪೊಲೀಸ್‌ ಕಮಿಷನರ್‌ ಪಿ. ಭಾಸ್ಕರರಾವ್‌ ಹಾಗೂ ಸಿಸಿಬಿಯ ಜಂಟಿ ಪೊಲೀಸ್‌ ಕಮಿಷನರ್‌ ಸಂದೀಪ್‌ ಪಾಟೀಲ ಅವರ ಜತೆ ಖಾಸಗಿ ವಾಹನಗಳಲ್ಲಿ ನಗರದ ವಿವಿಧ ಕಡೆಗಳಲ್ಲಿ ಓಡಾಡಿದ ಸಚಿವರು, ಸರ್ಕಾರದ ತೀರ್ಮಾನವನ್ನು ಜನ ಕಟ್ಟುನಿಟ್ಟಾಗಿ ಪಾಲಿಸಿದ್ದಾರೆಯೇ ಎಂದು ಪರಿಶೀಲಿಸಿದರು.

ರಸ್ತೆಯಲ್ಲಿ ಓಡಾಡುತ್ತಿದ್ದ ವಾಹನಗಳನ್ನು ತಡೆದು ಪರಿಶೀಲಿಸಿದರು. ಅನುಮತಿ ಪಡೆಯದೆ ಓಡಾಡುತ್ತಿದ್ದ ಕೆಲವು ವಾಹನಗಳನ್ನು ಜಪ್ತಿ ಮಾಡಲಾಯಿತು.

ADVERTISEMENT

ಮೆಜೆಸ್ಟಿಕ್‌, ಶಿವಾಜಿನಗರ, ಹೆಬ್ಬಾಳ, ಪೀಣ್ಯ, ಟ್ಯಾನರಿ ರಸ್ತೆ ಮುಂತಾದ ಕಡೆಗಳಲ್ಲಿ ಸಂಚರಿಸಿದ ಅವರು ಕರ್ತವ್ಯನಿರತ ಪೊಲೀಸರ ಯೋಗಕ್ಷೇಮ ವಿಚಾರಿಸಿ, ಸಮಸ್ಯೆಗಳನ್ನೂ ಆಲಿಸಿದರು.

‘ಇಲಾಖೆ ವಿತರಿಸಿರುವ ಪಾಸ್‌ಗಳನ್ನು ಕಲರ್ ಜೆರಾಕ್ಸ್ ತೆಗೆದು ದುರ್ಬಳಕೆ ಮಾಡಿಕೊಂಡಿರುವುದು ಈ ವೇಳೆ ಪತ್ತೆಯಾಗಿದೆ. ಇನ್ನೂ ಕೆಲವರು ಬ್ಯಾಂಕ್, ಆಸ್ಪತ್ರೆ ಸಿಬ್ಬಂದಿ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಬಳಕೆ ಮಾಡುತ್ತಿರುವುದು ಬಯಲಾಗಿದೆ. ಅಂತಹ ಪಾಸ್‌ಗಳನ್ನು ವಶಕ್ಕೆ ಪಡೆದು, ಅವರ ವಿರುದ್ಧ ಕ್ರಮ ಜರುಗಿಸಲು ಸೂಚಿಸಲಾಗಿದೆ. ಅನಗತ್ಯವಾಗಿ ಓಡಾಡುತ್ತಿರುವವರನ್ನು ನಿರ್ಬಂಧಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.