ಬೆಂಗಳೂರು: ಚಿಕ್ಕಮಗಳೂರಿನಲ್ಲಿ ಹೋಂಸ್ಟೇ ಇರುವುದಾಗಿ ಜಾಹೀರಾತು ನೀಡಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ವ್ಯಕ್ತಿಯೊಬ್ಬರು ನಗರದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.
‘ಫೇಸ್ಬುಕ್ ಜಾಲತಾಣದಲ್ಲಿ ಪ್ರಶಾಂತ್ ಪರಮೇಶ್ ಹೆಸರಿನಲ್ಲಿ ಖಾತೆ ಹೊಂದಿರುವ ಆರೋಪಿ, ನಕಲಿ ಜಾಹೀರಾತು ನೀಡಿ ವಂಚಿಸಿದ್ದಾರೆ. ಸದ್ಯ ಅವರು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಂಚನೆ ಬಗ್ಗೆ ಫೇಸ್ಬುಕ್ನಲ್ಲಿ ಪೋಸ್ಟ್ ಪ್ರಕಟಿಸಿರುವ ದೇವ್ ಬಾಲಾಜಿ ಶೆಟ್ಟಿ ಎಂಬುವರು, ‘ಹೋಂಸ್ಟೇ ಬಗ್ಗೆ ನಕಲಿ ಜಾಹೀರಾತು ನೀಡಿ ವಂಚಿಸುತ್ತಿರುವ ಪ್ರಶಾಂತ್ ಪರಮೇಶ್ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು’ ಎಂದಿದ್ದಾರೆ.
‘ಚಿಕ್ಕಮಗಳೂರಿಗೆ ಹೊರಟಿದ್ದ ಪರಿಚಯಸ್ಥರೊಬ್ಬರು, ಫೇಸ್ಬುಕ್ನಲ್ಲಿ ಆರೋಪಿ ನೀಡಿದ್ದ ಜಾಹೀರಾತು ನಂಬಿ ಹೋಂಸ್ಟೇನಲ್ಲಿ ಕೊಠಡಿ ಕಾಯ್ದಿರಿಸಿದ್ದರು. ಆರೋಪಿಗೆ ಮುಂಗಡವಾಗಿ ₹6,000 ನೀಡಿದ್ದರು. ನಿಗದಿತ ದಿನದಂದು ಸ್ಥಳಕ್ಕೆ ಹೋದಾಗ, ಅಲ್ಲಿ ಹೋಂಸ್ಟೇ ಇರಲಿಲ್ಲ. ಆರೋಪಿ ಸಹ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಪೊಲೀಸರಿಗೂ ದೂರು ನೀಡಲಾಗಿದೆ’ ಎಂದೂ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.