
ಬೆಂಗಳೂರು: ದೇಶೀಯ ಜೇನುತುಪ್ಪವನ್ನು ಜಾಗತಿಕವಾಗಿ ರಫ್ತು ಮಾಡಲು ಸಹಾಯಕವಾಗುವಂತೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಜಿಕೆವಿಕೆ ಆವರಣದಲ್ಲಿ ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ರೆಸೋನೆನ್ಸ್ (ಎನ್ಎಂಆರ್) ತಂತ್ರಜ್ಞಾನ ಸೌಲಭ್ಯ ಹೊಂದಿರುವ ಜೇನುತುಪ್ಪ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯ ಶೀಘ್ರದಲ್ಲೇ ಪ್ರಾರಂಭವಾಗಲಿದೆ.
ಮುಕ್ತ ಮಾರುಕಟ್ಟೆಯಲ್ಲಿ ನಕಲಿ ಲೇಬಲ್ ಹೊಂದಿದ, ಕಲಬೆರಕೆ ಜೇನುತುಪ್ಪವನ್ನು ಮಾರಾಟ ಮಾಡಲಾಗುತ್ತಿದೆ. ಇದನ್ನು ಪತ್ತೆ ಹಚ್ಚುವುದು ಬಹಳ ಕಷ್ಟ. ಆದರೆ ಎನ್ಎಂಆರ್ ತಂತ್ರಜ್ಞಾನವು ದತ್ತಾಂಶಗಳನ್ನು ಆಧರಿಸಿ ನಿಖರ ವರದಿ ನೀಡಲಿದ್ದು, ಕಲಬೆರಕೆ ಜೇನುತುಪ್ಪವನ್ನು ಪತ್ತೆ ಹಚ್ಚುತ್ತದೆ. ಈ ತಂತ್ರಜ್ಞಾನದ ಮೂಲಕ ಪಡೆದ ಪ್ರಮಾಣ ಪತ್ರಕ್ಕೆ ಜಾಗತಿಕ ಮಾನ್ಯತೆ ಇದೆ.
‘ಅಂತರರಾಷ್ಟ್ರೀಯ ಮಾರುಕಟ್ಟೆಗೆ ಜೇನುತುಪ್ಪವನ್ನು ರಫ್ತು ಮಾಡುವ ಜೇನು ಕೃಷಿಕರಿಗೆ ಈ ತಂತ್ರಜ್ಞಾನ ಸಹಾಯಕವಾಗಲಿದೆ. ಜಾಗತಿಕವಾಗಿ ಜೇನುತುಪ್ಪ ರಫ್ತು ಮಾಡುವ ಸಂಸ್ಕರಣೆದಾರರು ಹಾಗೂ ಉತ್ಪಾದಕರು ಎನ್ಎಂಆರ್ ಆಧಾರಿತ ಜೇನು ಪರೀಕ್ಷಾ ಪ್ರಮಾಣ ಪತ್ರವನ್ನು ಪಡೆಯಬೇಕಾಗುತ್ತದೆ. ಇದು ಐರೋಪ್ಯ ಒಕ್ಕೂಟ, ಅಮೆರಿಕ, ಮಧ್ಯಪೂರ್ವ, ಜಪಾನ್ ಮತ್ತು ಆಸ್ಟ್ರೇಲಿಯಾ ಮೊದಲಾದ ಕಡೆಗೆ ಗುಣಮಟ್ಟದ ಜೇನುತುಪ್ಪವನ್ನು ರಫ್ತು ಮಾಡಲು ಎನ್ಎಂಆರ್ ತಂತ್ರಜ್ಞಾನದ ಮಾನ್ಯತೆ ಬೇಕಾಗುತ್ತದೆ’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ ‘ಪ್ರಜಾವಾಣಿ’ಗೆ ತಿಳಿಸಿದರು.
‘ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ (ವಿಟಿಪಿಸಿ) ಸಹಯೋಗದಲ್ಲಿ ₹10.3 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಪ್ರಯೋಗಾಲಯ ಪ್ರಾರಂಭಿಸಲಾಗುತ್ತದೆ. ಇದರ ಜೊತೆಗೆ ಕೌಶಲ ಅಭಿವೃದ್ಧಿ ತರಬೇತಿಗೆ ಎಚ್ಎಎಲ್ ₹4.8 ಕೋಟಿ ಅನುದಾನ ನೀಡಿದೆ’ ಎಂದು ಮಾಹಿತಿ ನೀಡಿದರು.
‘ಜೇನುತುಪ್ಪದಲ್ಲಿ ಮಿಶ್ರಣ ಮಾಡುವ ಸಕ್ಕರೆ, ಬೆಲ್ಲದ ಅಂಶ, ರೈಸ್ ಸಿರಪ್ ಸೇರಿದಂತೆ ಬೇರೆ ಅಂಶಗಳನ್ನು ಎನ್ಎಂಆರ್ ತಂತ್ರಜ್ಞಾನ ಸುಲಭವಾಗಿ ಪತ್ತೆ ಹಚ್ಚಲಿದೆ. ಜೇನುತುಪ್ಪ ಉತ್ಪಾದನೆಯ ಸಸ್ಯ ಮೂಲ, ಭೌಗೋಳಿಕ ನೆಲೆಯನ್ನು ಈ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಕಂಡು ಹಿಡಿದು ದತ್ತಾಂಶಗಳನ್ನು ಸಂಗ್ರಹ ಮಾಡುತ್ತದೆ’ ಎಂದರು.
‘ನಮ್ಮ ದೇಶದಲ್ಲಿ ಜೇನುತುಪ್ಪದ ಗುಣಮಟ್ಟ ಪರೀಕ್ಷೆ ಮಾಡುವ ಪ್ರಯೋಗಾಲಯಗಳ ಸಂಖ್ಯೆ ಕಡಿಮೆ ಇದೆ. ಪ್ರಸ್ತುತ ಜಿಕೆವಿಕೆಯಲ್ಲಿ ಆರಂಭವಾಗಲಿರುವ ಎನ್ಎಂಆರ್ ಪ್ರಯೋಗಾಲಯ ಸ್ಥಳೀಯವಾಗಿ ಲಭ್ಯವಿದ್ದು, ಜಾಗತಿಕ ಮಾನದಂಡಗಳನ್ನು ಆಧರಿಸಿ ಜೇನುತುಪ್ಪ ಗುಣಮಟ್ಟದ ಪ್ರಮಾಣ ಪತ್ರ ನೀಡಲಿದೆ. ಜೇನುತುಪ್ಪ ರಫ್ತು ಮಾಡುವವರು ನಿಗದಿತ ದರ ಪಾವತಿಸಿ ಇದರ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬಹುದು’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.