ADVERTISEMENT

ಬೆಂಗಳೂರು ನಗರದ ಆಸ್ಪತ್ರೆಗಳಲ್ಲಿ ಸಿದ್ಧತಾ ತಾಲೀಮು

ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದ ವ್ಯವಸ್ಥೆ ಬಗ್ಗೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2022, 23:45 IST
Last Updated 27 ಡಿಸೆಂಬರ್ 2022, 23:45 IST
ನಗರದ ಕೆ.ಸಿ. ಜನರಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಸಿದ್ಧತಾ ತಾಲೀಮು ನಡೆಸಲಾಯಿತು. – ಪ್ರಜಾವಾಣಿ ಚಿತ್ರ
ನಗರದ ಕೆ.ಸಿ. ಜನರಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಸಿದ್ಧತಾ ತಾಲೀಮು ನಡೆಸಲಾಯಿತು. – ಪ್ರಜಾವಾಣಿ ಚಿತ್ರ   

ಬೆಂಗಳೂರು: ವಿಕ್ಟೋರಿಯಾ ಸೇರಿ ನಗರದ ವಿವಿಧ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದ ಸಿದ್ಧತೆಯ ತಾಲೀಮನ್ನು ಮಂಗಳವಾರ ನಡೆಸಲಾಯಿತು.

ಆಮ್ಲಜನಕ ಘಟಕಗಳ ಕಾರ್ಯನಿರ್ವಹಣೆ, ಹಾಸಿಗೆಗಳ ವ್ಯವಸ್ಥೆ, ವೈದ್ಯಕೀಯ ಸಿಬ್ಬಂದಿ ಲಭ್ಯತೆ ಸೇರಿ ಆಸ್ಪತ್ರೆಯಲ್ಲಿನ ವ್ಯವಸ್ಥೆಯ ಬಗ್ಗೆ ಪರಿಶೀಲಿಸಲಾಯಿತು.ಚಿಕಿತ್ಸೆ, ಆರೈಕೆಯ ಬಗ್ಗೆ ವೈದ್ಯರು, ಶುಶ್ರೂಷಕರು ಹಾಗೂ ಸಿಬ್ಬಂದಿಯಲ್ಲಿ ಅರಿವು ಮೂಡಿಸಲಾಯಿತು.ಕೆ.ಸಿ. ಜನರಲ್, ಸರ್.ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆ ಸೇರಿ ಪ್ರಮುಖ ಆಸ್ಪತ್ರೆಗಳಲ್ಲಿ ಸಿದ್ಧತಾ ತಾಲೀಮು ಯಶಸ್ವಿಯಾಗಿ ನಡೆಯಿತು.

‘ಕೋವಿಡ್ ಚಿಕಿತ್ಸೆಗೆ ಒಂದು ಬ್ಲಾಕ್ ಮೀಸಲಿಡಲಾಗಿದೆ. ಸದ್ಯ 50 ಹಾಸಿಗೆಗಳನ್ನು ಗುರುತಿಸಲಾಗಿದೆ. 8 ಎಚ್‌ಡಿಯು, 4 ಐಸಿಯು ಹಾಸಿಗೆಗಳನ್ನು ಮೀಸಲಿಡಲಾಗಿದ್ದು, ಉಳಿದವು ಸಾಮಾನ್ಯ ಹಾಸಿಗೆಗಳಾಗಿವೆ. ಕೊರೊನಾಸೋಂಕಿತರು ಆಸ್ಪತ್ರೆಗೆ ಬಂದಾಗ ಉಪಚರಿಸುವ ರೀತಿ, ವಿವಿಧ ಕಾಯಿಲೆಗಳಿರುವ ರೋಗಿಗಳ ಆರೈಕೆಯ ಬಗ್ಗೆಯೂ ತಿಳಿಸಲಾಗಿದೆ.ಕೋವಿಡ್ ಪರಿಸ್ಥಿತಿ ನಿಭಾಯಿಸಲು ಆಸ್ಪತ್ರೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸಜ್ಜಾಗಿದೆ. ವೈದ್ಯಕೀಯ ಆಮ್ಲಜಕ ವ್ಯವಸ್ಥೆಯೂ ಸಮರ್ಪಕವಾಗಿ ಇದೆ’ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಡಾ. ರಮೇಶ್ ಕೃಷ್ಣ ತಿಳಿಸಿದರು‌.

ADVERTISEMENT

ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿವೈದ್ಯಕೀಯ ಅಧೀಕ್ಷಕಿ ಡಾ. ಇಂದಿರಾ ಕಬಾಡೆ ಹಾಗೂ ಸ್ಥಾನಿಕ ವೈದ್ಯಾಧಿಕಾರಿ ಆರ್.ಎಂ. ಮೋಹನ್ ಅವರ ಸಮ್ಮುಖದಲ್ಲಿ ಸಿದ್ಧತಾ ತಾಲೀಮು ನಡೆಯಿತು. ಇಂದಿರಾನಗರದ ಸರ್ ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗೆ 90 ಹಾಸಿಗೆಗಳನ್ನು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ನಡೆಯದ ತಾಲೀಮು:ಬೌರಿಂಗ್ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸಾ ಕೇಂದ್ರವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಆದ್ದರಿಂದ ಅಲ್ಲಿ ಸಿದ್ಧತಾ ತಾಲೀಮು ನಡೆಯಲಿಲ್ಲ.

‘ಆಸ್ಪತ್ರೆಯು ಕಳೆದ ಮೂರು ಅಲೆಗಳಿಂದ ಕೋವಿಡ್ ಸೋಂಕಿತರಿಗೆ ನಿರಂತರ ಚಿಕಿತ್ಸೆ ನೀಡುತ್ತಿದೆ. ಇಲ್ಲಿನ ಕೋವಿಡ್ ವಾರ್ಡ್ ಮುಚ್ಚಿರಲಿಲ್ಲ. ಹಾಗಾಗಿ, ಸಿದ್ಧತಾ ತಾಲೀಮನ್ನು ನಡೆಸಲಿಲ್ಲ.ವಿಮಾನ ನಿಲ್ದಾಣದಲ್ಲಿ ಸೋಂಕು ದೃಢಪಟ್ಟವರಿಗೆ ಇಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಕೋವಿಡ್ ಚಿಕಿತ್ಸೆಗೆಸದ್ಯ 60 ಸಾಮಾನ್ಯ ಹಾಸಿಗೆ ಹಾಗೂ 10 ಐಸಿಯು ಹಾಸಿಗೆ ಮೀಸಲಿಡಲಾಗಿದೆ. ಸಿಬ್ಬಂದಿ ಕೂಡ ಉತ್ತಮ ತರಬೇತಿ ಹೊಂದಿದ್ದಾರೆ’ ಎಂದು ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಕೆಂಪರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.